ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕರಾವಳಿಯ ರೈತ ಈ ಬಾರಿ ಭತ್ತದ ಬೆಳೆಯನ್ನು ಬೆಳೆದು ಉತ್ತಮ ಫಸಲು ಬಂದರೂ ಕೂಡಾ ಈ ಬಾರಿ ಅಕಾಲದಲ್ಲಿ ಬಂದ ಬಾರಿ ಮಳೆಗೆ ಜಾನುವಾರುಗಳ ಮೇವಿಗೆ ಬೇಕಾಗುವ ಒಣ ಹುಲ್ಲು ಹಾಳಾಗಿತ್ತು. ಹೀಗಾಗಿ ಎರಡನೇ ಬೆಳೆಯಾದ ಸುಗ್ಗಿಯನ್ನು ಮಾಡಿ ಇದೀಗ ಫಸಲು ಕೈಗೆ ಬರುವ ಹೊತ್ತಿನಲ್ಲಿ ಮತ್ತೆ ಅಕಾಲದಲ್ಲಿ ಮಳೆ ಕೆಲವು ಭಾಗದಲ್ಲಿ ಸುರಿದಿದೆ.
ಬಾರಕೂರು ಬಳಿಯ ಹನೆಹಳ್ಳಿ, ಬಂಡೀಮಠ, ಕೂರಾಡಿ ಸೇರಿದಂತೆ ಅನೇಕ ಭಾಗದಲ್ಲಿ ಈ ಬಾರಿ ಅನೇಕ ರೈತರು ಸುಗ್ಗಿ ಬೆಳೆಯನ್ನು ಬೆಳೆಸಿದ್ದಾರೆ. ಒಂದೇ ತರದ ಬೀಜಗಳ ಲಭ್ಯತೆ ಇಲ್ಲದ ಕಾರಣ ಸಿಕ್ಕಿದ ಬೀಜಗಳ ಬಿತ್ತನೆ ಮಾಡಿದ ಕಾರಣ ಕೆಲವು ನಿಧಾನ ಗತಿಯ ಬೆಳವಣಿಗೆ, ಇನ್ನು ಕೆಲವು ಬೇಗ ಬೆಳೆಯುವ ತಳಿಗಳ ಬಿತ್ತನೆಯಿಂದ ಒಂದೊಂದು ಗದ್ದೆಯಲ್ಲಿ ಬೆಳೆದಿದ್ದು, ಇನ್ನು ಕೆಲವು ಕಾಯಿ ಇರುವುದು ಕಂಡು ಬರುತ್ತಿದೆ.
ಆದರೂ ಬೆಳೆದ ಬೆಳೆಯನ್ನು ಸೂಕ್ತ ಸಮಯದಲ್ಲಿ ಕಟಾವು ಮಾಡದಲ್ಲಿ ಕೈಗೆ ಬಂದುದು ಬಾಯಿಗೆ ಬರದಂತಾಗುತ್ತದೆ. ಕಟಾವು ಯಂತ್ರಗಳು ಬೇರೆ ಗದ್ದೆಗಳು ಕಟಾವಿಗೆ ಇರದ ಗದ್ದೆಯಲ್ಲಿ ಸಂಚರಿಸುವಂತೆ ಇಲ್ಲ.
ಇದೆಲ್ಲದರ ನಡುವೆ ಮಾನವ ಆಳು ಸಿಗುವಂತಿಲ್ಲ. ಸಿಕ್ಕರೂ ಕಟಾವು ಮಾಡುವ ಹಲ್ಲು ಕತ್ತಿ ಸಿಗದ ಸ್ಥಿತಿ. ಇದೆಲ್ಲದರ ನಡುವೆ ಅನ್ನದಾತ ಮಾತ್ರ ಸಮಸ್ಯೆ ಗಳ ನಡುವೆ ಉತ್ತುವ ಬಿತ್ತುವ ಬೆಳೆ ತೆಗೆಯುವ ಕಾಯಕ ಮಾಡುತ್ತಲೇ ಇರುತ್ತಾನೆ
ಮೊದಲ ಮಳೆಯಲ್ಲಿ ಏನೂ ಸಿಕ್ಕಿರಲಿಲ್ಲ. ಎರಡನೇ ಬೆಳೆ ಬೆಳೆದಿದ್ದು, ಕಟಾವು ಯಂತ್ರ, ಆಳುಗಳ ಸಮಸ್ಯೆ ಕಾಡುತ್ತಿದೆ. ಇದೀಗ ಮಳೆಯ ಮುನ್ಸೂಚನೆ ಇರುವುದು ಆತಂಕ ಹುಟ್ಟಿಸಿದೆ.ಸರೋಜ ಆಚಾರ್ಯ, ಕೃಷಿಕರು, ಬಂಡೀಮಠ

