ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಮನೆಯಂಗಳದಲ್ಲಿ ಕಸಕ್ಕೆ ಬೆಂಕಿ ಹಾಕಿದ ವಿಚಾರವೊಂದಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಕೋಟೇಶ್ವರ ಸಮೀಪದ ಗೋಪಾಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಗೋಪಾಡಿ ಗ್ರಾಮದ ಹಾಲಾಡಿ ಮನೆಯ ನಿವಾಸಿ ನರಸಿಂಹ ಮರಕಾಲ (74) ಕೊಲೆಯಾದ ವ್ಯಕ್ತಿ. ಪುತ್ರ ರಾಘವೇಂದ್ರ ( 36) ಕೊಲೆಗೈದ ಆರೋಪಿ. ಈಗಾಗಲೇ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.


ಕೌಟುಂಬಿಕ ದ್ವೇಷ ಕಾರಣ:
ಆರೋಪಿ ರಾಘವೇಂದ್ರ ತೋಳಾರ್ ಜಾಗದ ವಿಚಾರದಲ್ಲಿ ತಂದೆಯೊಂದಿಗೆ ಜಗಳ ಮಾಡಿಕೊಂಡಿದ್ದ. ಕಳೆದ ಕೆಲ ವರ್ಷಗಳಿಂದ ಮನೆಯ ಒಂದು ಭಾಗದಲ್ಲಿ ಪ್ರತ್ಯೇಕವಾಗಿ ವಾಸವಿದ್ದನು ಎನ್ನಲಾಗಿದೆ. ಆರೋಪಿ ರಾಘವೇಂದ್ರ ಶನಿವಾರ ರಾತ್ರಿ ಮನೆಯ ಅಂಗಳದಲ್ಲಿ ಕಸಕಡ್ಡಿ ಸಂಗ್ರಹಿಸಿ ಅದಕ್ಕೆ ಬೆಂಕಿ ಹಾಕಿದ್ದಾನೆ ಎನ್ನಲಾಗಿದೆ. ಪಕ್ಕದಲ್ಲಿಯೇ ದನದ ಕೊಟ್ಟಿಗೆ, ಹುಲ್ಲು ರಾಶಿ ಇದ್ದ ಕಾರಣ ನರಸಿಂಹ ಮರಕಾಲ ಅವರು ಬೆಂಕಿಗೆ ನೀರು ಹಾಕಿ ಆರಿಸಲು ಹೋದ ವೇಳೆ ರಾಘವೇಂದ್ರ ಏಕಾಏಕಿ ತಂದೆ ಮೇಲೆ ಎಗರಾಡಿದ್ದಾನೆ. ಬಳಿಕ ಮನೆಯ ಒಳಗಿದ್ದ ಕಬ್ಬಿಣದ ಕೊಡಲಿಯನ್ನು ತಂದು ನರಸಿಂಹ ಮರಕಾಲ ಅವರ ತಲೆ ಹಾಗೂ ಮುಖವನ್ನು ಬಲವಾಗಿ ಕಡಿದಿದ್ದಾನೆ.
ಅಲ್ಲೇ ಇದ್ದ ನರಸಿಂಹ ಅವರ ಪುತ್ರಿ ತಪ್ಪಿಸಲು ಹೋದಾಗ ಅವರಿಗೂ ಕೊಡಲಿಯನ್ನು ಬೀಸಿದ್ದಾನೆ. ಪರಿಣಾಮ ಆಕೆ ಗಾಯಗೊಂಡಿದ್ದಾರೆ.
ಹಲ್ಲೆಯಿಂದ ನರಸಿಂಹ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಕೂಡಲೇ ಕೋಟೇಶ್ವರದ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಿದ ಅವರು ಕೊನೆಯುಸಿರೆಳೆದಿದ್ದಾರೆ.
ಎಸ್ಪಿ ವಿಷ್ಣುವರ್ಧನ್ ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

