ಹುಬ್ಬಳ್ಳಿ : ಏಪ್ರಿಲ್ 5 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರ್ಕಾರಿ ವಿಶೇಷ ಕಾರ್ಯಕ್ರಮಗಳ ಉದ್ಘಾಟನೆಗಾಗಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಏಪ್ರಿಲ್ 5ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ ನೀಡಿಲಿದ್ದಾರೆ. ಇದಲ್ಲದೆ ಏಪ್ರಿಲ್ 1 ರಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಸಹಕಾರಿ ರಂಗದಲ್ಲಿ ಹಲವಾರು ಸುಧಾರಣೆಗಳನ್ನು ತರಬೇಕೆಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾದ್ದು, ಕ್ಷೀರ ಅಭಿವೃದ್ಧಿ ಬ್ಯಾಂಕ್ ಪ್ರಾರಂಭ ಮಾಡಲು ಉದ್ದೇಶಿಸಿದೆ. ಅದರ ಲಾಂಛನದ ಉದ್ಘಾಟನೆ ಮಾಡಲು ಬೃಹತ್ ಸಭೆ ಏರ್ಪಾಡು ಮಾಡಲಾಗುತ್ತಿದೆ. ಕ್ಷೀರ ಕ್ಷೇತ್ರದಲ್ಲಿ ಆರ್ಥಿಕ ಅಭಿವೃದ್ಧಿಗೆ ಇಂಬು ನೀಡಿ ಆರ್ಥಿಕ ಕ್ರಾಂತಿಯಾಗಲಿದ್ದು, ಇದರಿಂದ ರೈತರ ಆದಾಯ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಲಿದೆ. ರೈತರಿಗೆ ಆರ್ಥಿಕ ಸಹಾಯ ದೊರೆಯಲು ನೆರವಾಗಲಿದೆ. ಲಾಂಛನ ಹಾಗೂ ಯಾಶಸ್ವಿನಿ ಯೋಜನೆಯ ಉದ್ಘಾಟನೆಯನ್ನು ಅಮಿತ್ ಷಾ ಅವರು ನೆರವೇರಿಸಲಿದ್ದಾರೆ ಎಂದರು.

ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಾಗಿ ಅಮಿತ್ ಶಾ ಬರುತ್ತಿಲ್ಲ. ಸರ್ಕಾರಿ ಕಾರ್ಯಕ್ರಮ ಹಿನ್ನೆಲೆ ಅಮಿತ್ ಶಾ ಬರುತ್ತಿದ್ದಾರೆ ಎಂದು ತಿಳಿಸಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ. ವರಿಷ್ಠರು ಕರೆ ಕೊಟ್ಟರೆ ನಾನೇ ದೆಹಲಿಗೆ ಹೋಗುತ್ತೇನೆ ಎಂದರು.
