ಬೆಳಗಾವಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಆಂಕೋಲ ಉದ್ಯಮಿ ಆರ್ ಎನ್ ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭೂಗತ ಪಾತಕಿ ಬನ್ನಂಜೆ ರಾಜ ಸೇರಿದಂತೆ 8 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಕೋರ್ಟ್ ಆದೇಶಿಸಿದೆ.
ಈ ಸಂಬಂಧ ಬೆಳಗಾವಿಯ ಕೋಕಾ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿಯವರು ತೀರ್ಪು ಪ್ರಕಟಿಸಿದ್ದಾರೆ. ಸುಫಾರಿ ಕೊಟ್ಟು ಕೊಲೆ ಮಾಡಿಸಿದಂತ ಆರೋಪ ಸಾಭೀತಾದ ಹಿನ್ನಲೆಯಲ್ಲಿ, ಭೂಗತ ಪಾತಕಿ ಬನ್ನಂಜೆ ರಾಜ, ಉತ್ತರ ಪ್ರದೇಶ ಮೂಲಕ ಅಂಕಿತ್ ಕುಮಾರ್ ಕಶ್ಯಪ್, ಜಗದೀಶ್ ಪಟೇಲ್, ಬೆಂಗಳೂರಿನ ಅಭಿ ಬಂಡಗಾರ್, ಜಗದೀಶ್ ಚಂದ್ರರಾಜ್, ಹಾಸನದ ಮಹೇಶ್ ಅಚ್ಚಂಗಿ, ಉಡುಪಿಯ ಗಣೇಜ್ ಭಜಂತ್ರಿ, ಕೇರಳದ ಎಂ.ಬಿ ಸಂತೋಷ್ ಸೇರಿದಂತೆ 8 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಆಂಕೋಲದಲ್ಲಿ 2013ರ ಡಿಸೆಂಬರ್ 23ರಂದು ಉದ್ಯಮಿ ಆರ್. ಎನ್. ನಾಯಕ್ ಕೊಲೆ ಮಾಡಲಾಗಿತ್ತು.

ಈ ಪ್ರಕರದಣಲ್ಲಿ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಫೆಬ್ರವರಿ 12, 2015ರಂದು ಭೂಗತ ಪಾತಕ ಬನ್ನಂಜೆ ರಾಜನನ್ನು ಮೊರಕ್ಕೋದಲ್ಲಿ ಬಂಧಿಸಿದ್ದರು. ಈ ಬಳಿಕ ಭಾರತಕ್ಕೆ ಕರೆತರಲಾಗಿತ್ತು. ಸುಮಾರು 7 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ, ನ್ಯಾಯಾಲಯವು ಆರೋಪ ಸಾಭೀತಾದಂತ 9 ಅಪರಾಧಿಗಳಲ್ಲಿ 8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.