ನವದೆಹಲಿ : ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣದಲ್ಲಿ 1,034 ಕೋಟಿ ರೂ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಶಿವ ಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಸೇರಿದ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ. ಸಂಜಯ್ ರಾವತ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಅಲಿ ಬಾಗ್ ನಲ್ಲಿರುವ ಎಂಟು ಆಸ್ತಿಗಳನ್ನು ಮತ್ತು ಮುಂಬೈನ ದಾದರ್ ಉಪನಗರದ ಫ್ಲ್ಯಾಟ್ ನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಫೆಡರಲ್ ತನಿಖಾ ಸಂಸ್ಥೆ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಅಲಿಬಾಗ್ನಲ್ಲಿರುವ ಎಂಟು ಭೂಮಿಗಳು ಹಾಗೂ ಮಹಾರಾಷ್ಟ ರಾಜಧಾನಿ ಮುಂಬಯಿಯ ದಾದರ್ನಲ್ಲಿ ಇರುವ ಒಂದು ಫ್ಲ್ಯಾಟ್ ಅನ್ನು ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನ್ನ ವಶಕ್ಕೆ ಪಡೆದುಕೊಂಡಿದೆ.
ಪತ್ರಾ ಚಾವ್ಲ್ ಭೂ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಪ್ರವೀಣ್ ರಾವತ್ ಅವರು 55 ಕೋಟಿ ರೂ ಮೊತ್ತದ ಹಣವನ್ನು ತಮ್ಮ ಪತ್ನಿಯ ಖಾತೆಯಿಂದ ಸಂಜಯ್ ರಾವತ್ ಅವರ ಪತ್ನಿ ವರ್ಷಾ ಖಾತೆಗೆ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿತ್ತು. ಈ ಹಣ ವರ್ಗಾವಣೆ ಮೂಲಕ ಅಲಿಬಾಗ್ನಲ್ಲಿ ಭೂಮಿ ಖರೀದಿ ಮಾಡಲಾಗಿದೆ. 2010 ಮತ್ತು 2012ರ ನಡುವೆ ಭಾರಿ ಪ್ರಮಾಣದಲ್ಲಿ ನಗದು ಪಾವತಿಗಳನ್ನು ನಡೆಸಲಾಗಿದೆ ಎಂದು ಇ.ಡಿ ಹೇಳಿದ್ದು, ಸಂಜಯ್ ರಾವತ್ ಪತ್ನಿಗೆ ಪ್ರವೀಣ್ ರಾವತ್ ಪತ್ನಿ 55 ಲಕ್ಷ ರೂ ಸಾಲ ಕೂಡ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರವೀಣ್ ರಾವತ್ ಜತೆಗೆ ಎಚ್ಡಿಐಎಲ್ನ ಸಾರಂಗ್ ವಧಾವನ್ ಮತ್ತು ರಾಕೇಶ್ ವಧಾವನ್, ಗುರು ಆಶಿಶ್ ಕನ್ಸ್ಟ್ರಕ್ಷನ್ ರಿಯಲ್ ಎಸ್ಟೇಟ್ ಸಂಸ್ಥೆ ಹಾಗೂ ಇತರರನ್ನು ಕೂಡ ಆರೋಪಪಟ್ಟಿಯಲ್ಲಿ ಇ.ಡಿ ಹೆಸರಿಸಿದೆ. ಪ್ರವೀಣ್ ಅವರನ್ನು ಫೆಬ್ರವರಿ 2ರಂದು ಇ.ಡಿ ಬಂಧಿಸಿತ್ತು.
ಗೋರೆಗಾಂವ್ನಲ್ಲಿನ ಪತ್ರಾ ಚಾವ್ಲ್ನಲ್ಲಿ 1034 ಕೋಟಿ ರೂ ಮೊತ್ತದ ಫ್ಲೂರ್ ಸ್ಪೇಸ್ ಇಂಡೆಕ್ಸ್ (ಎಫ್ಎಸ್ಐ) ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಮಹಾರಾಷ್ಟ್ರ ಹೌಸಿಂಗ್ ಆಂಡ್ ಏರಿಯಾ ಡೆವಲಪ್ಮೆಂಟ್ ಅಥಾರಿಟಿ ಕೆಲವು ವರ್ಷಗಳ ಹಿಂದೆ ಮುಂಬಯಿಯ ಉಪ ನಗರ ಗೋರೆಗಾಂವ್ ಪಶ್ಚಿಮದಲ್ಲಿನ ಪತ್ರಾ ಚಾವ್ಲ್ ಎಂಬಲ್ಲಿ ಮರು ಅಭಿವೃದ್ಧಿಗೆ ಗುರು ಆಶಿಶ್ ಕನ್ಸ್ಟ್ರಕ್ಷನ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಎಂಎಚ್ಎಡಿಎ ಮತ್ತು ಎಚ್ಡಿಐಎಲ್ ನಡುವಿನ ವ್ಯವಹಾರದಲ್ಲಿ ಪ್ರವೀಣ್ ರಾವತ್ ಮಧ್ಯಸ್ಥಿಕೆ ವಹಿಸಿದ್ದರು. ಚಾವ್ಲ್ನಲ್ಲಿ ವಾಸಿಸುವ ಜನರಿಗೆ ಕಡ್ಡಾಯ ವಠಾರಗಳನ್ನು ನಿರ್ಮಿಸದೆಯೇ 1034 ಕೋ.ರೂ ಮೌಲ್ಯದ ಎಫ್ಎಸ್ಐ ಅನ್ನು ಕಂಪೆನಿಯು ಮಾರಾಟ ಮಾಡಿ ವಂಚಿಸಿದೆ ಎಂದು ಇ.ಡಿ ಆರೋಪಿಸಿದೆ.

