ಕೇವಲ ಶ್ರೀಮಂತರ ಕ್ರೀಡೆ ಆಗಿದ್ದ ಷಟಲ್ ಬ್ಯಾಡ್ಮಿಂಟನ್ ಆಟವನ್ನು ಬಡ ಮಕ್ಕಳೂ ಕೂಡಾ ಕಲಿತು ಸಾಧನೆ ತೋರಬೇಕೆಂಬ ಉದ್ದೇಶದಿಂದ ಸತತ 35 ವರ್ಷಗಳಿಂದ ರಾಜ್ಯ -ರಾಷ್ಟ್ರ ಮಟ್ಟದಲ್ಲಿ ಹಲವಾರು ಕ್ರೀಡಾ ಪ್ರತಿಭೆಗಳಿಗೆ ಪ್ರಾಮಾಣಿಕವಾಗಿ ತರಬೇತಿಯನ್ನು ನೀಡಿ ಸಾಧನೆ ಮಾಡಿದ ಉಡುಪಿ ಗುಂಡಿಬೈಲಿನ ಸದಾಶಿವ ಉದ್ಯಾವರ್ ಕ್ರೀಡಾ ಕ್ಷೇತ್ರದ ಹಿರಿಯ ಪ್ರತಿಭೆ.
ಗೋಲ್ಡನ್ ಜುಬಿಲಿ ಕ್ಲಬಿನ ಸದಸ್ಯರಾಗಿದ್ದ ಇವರು ಹುಟ್ಟಿದ್ದು ಉದ್ಯಾವರದ ಬೊಳ್ಜೆ ಎಂಬ ಊರಲ್ಲಿ . ಪತ್ನಿ ಸರೋಜಾ ಸದಾಶಿವ ಉತ್ತಮ ತ್ರೋ ಬಾಲ್ ಆಟಗಾರ್ತಿಯಾಗಿದ್ದು , ಈಗಲೂ ಟೀಮ್ ಕಟ್ಟಿಕೊಂಡು ಮ್ಯಾಚ್ ನಲ್ಲಿ ಭಾಗವಹಿಸುತ್ತಾರೆ. ಮಕ್ಕಳಾದ ಸನತ್ ಸದಾಶಿವ್ ರಾಜ್ಯ ಮಟ್ಟದ ಅಥ್ಲೀಟ್ ಮತ್ತು ಷಟಲ್ ಬ್ಯಾಡ್ಮಿಂಟನ್ ಆಟಗಾರಾಗಿದ್ದಾರೆ. ಎರಡನೇ ಮಗನಾದ ಸಮರ್ಥ್ ಸದಾಶಿವ್ ರಾಷ್ಟ್ರೀಯ ಮಟ್ಟದ ಅಥ್ಲೀಟ್ ಆಗಿ ಬೆಳೆಸಿದ ಹೆಗ್ಗಳಿಕೆ ಇವರದ್ದು. ಇವರ ಇಡೀ ಕುಟುಂಬವೇ ಕ್ರೀಡಾ ಕುಟುಂಬ ಆಗಿದೆ.
ಕೆಲವು ಬಡಮಕ್ಕಳಿಗೆ ಉಚಿತವಾಗಿ ತರಬೇತಿಯನ್ನು ನೀಡುತ್ತಿದ್ದು ಅವರು ರಾಷ್ಟೃಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕ್ರೀಡೆಗೆ ತನ್ನ ಅತ್ಯಲ್ಪ ಸೇವೆ ಎಂದು ಈ 60ರ ವಯಸ್ಸಿನಲ್ಲೂ ಈಗಿನ ಮಕ್ಕಳು, ಕಂಪ್ಯೂಟರ್, ಮೊಬೈಲ್ ಗಳ ದಾಸರಾಗದೆ ಕ್ರೀಡೆಯಲ್ಲಿ ತೊಡಗಿಸಬೇಕೆಂಬ ಆಶಯ ಈ ಕ್ರೀಡಾ ಪ್ರೇಮಿಯದ್ದು. ಈ ಹಿಂದೆ ಮಿಲಾಗ್ರಿಸ್ ಕಾಲೇಜು,ಪೊಲೀಸ್ ಕ್ವಾರ್ಟರ್ಸ್ ಚಂದು ಮೈದಾನ ಉಡುಪಿ , ಅಜ್ಜರಕಾಡು ಕ್ರೀಡಾಂಗಣ,ಡಿಸಿ ಕೋರ್ಟ್ ಬನ್ನಂಜೆ ತರಬೇತಿಯನ್ನು ನೀಡಿದ್ದರು.ಈಗ ದೊಡ್ಡಣ್ಣ ಗುಡ್ಡೆ ಜನತಾ ವ್ಯಾಯಾಮ ಶಾಲೆಯಲ್ಲಿ ಷಟಲ್ ಬ್ಯಾಡ್ಮಿಂಟನ್ ತರಬೇತಿಯನ್ನು ನೀಡುತ್ತಿದ್ದಾರೆ.
ಬಿ ಕಾಮ್ ಪದವೀಧರಾಗಿರುವ ಇವರು ಪ್ರಚಾರಕ್ಕೆ ಒಗ್ಗದ ಎಲೆಮರೆಯ ಕಾಯಿಯಂತಿರುವ, ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡವರು. ಇವರ ಮನೆಯಲ್ಲಿ ಮೆಡಲ್ ಗಳು, ಮೊಮೆಂಟೋಗಳು, ಸರ್ಟಿಫಿಕೇಟ್, ಫೀಲ್ಡ್ ಗಳು ರಾಶಿಯಾಗಿ ಇವೆ. ತುಂಬಾ ಸನ್ಮಾನಗಳು ನಡೆದಿವೆ. ಉಡುಪಿ ಜಿಲ್ಲೆಯ 80% ಷಟಲ್ ಬ್ಯಾಡ್ಮಿಂಟನ್ ಆಟಗಾರರು ಇವರ ಶಿಷ್ಯರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.
ಹವ್ಯಾಸಿ ನಾಟಕ ಕಲಾವಿದರಾಗಿ ಇವರು ನಾಯಕ, ಪ್ರತಿ ನಾಯಕ ಮತ್ತು ಹಾಸ್ಯ ಪಾತ್ರಗಳನ್ನು ಮಾಡಿ ಮಿಂಚಿದವರು. ಉದ್ಯಾವರ ನಾಗೇಶ್ ಕುಮಾರ್ ನಿರ್ದೇಶನದ ಹಲವಾರು ಪ್ರಾಯೋಗಿಕ ನಾಟಕಗಳಲ್ಲಿ ನಟಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಕ್ರೀಡೆಯಿಂದ ಆತ್ಮ ಬಲ, ಮನೋಸ್ಥೈರ್ಯ.
ಜೀವನದಲ್ಲಿ ಎಂತಹ ಕಠಿಣ ಸಮಸ್ಯೆಗಳು ಬಂದಾಗ ಎದುರಿಸುವ ಶಕ್ತಿ, ಧೈರ್ಯ ಅವರು ಸ್ವತಹ ಅನುಭವಿಸಿ ಹೇಳುವ ಮಾತುಗಳು.

