ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಮಂಗಳವಾರ ತಡರಾತ್ರಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ಹೆಬ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಹೆಬ್ರಿ ಬ್ಯಾಣ ದಲ್ಲಿ ನಡೆದಿದೆ.
ಹೆಬ್ರಿ ತಾಲ್ಲೂಕಿನ ಆರ್ಡಿ ಅಲ್ಬಾಡಿ ಪರಿಸರದಿಂದ 14 ದನಗಳನ್ನು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ವಧೆ ಮಾಡಲು ಆರೋಪಿಗಳು ಸಾಗಾಟ ಮಾಡುತ್ತಿರುವುದು ಹೆಬ್ರಿ ಪೊಲೀಸರಿಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ಹೆಬ್ರಿಯ ದಕ್ಷ ಠಾಣಾಧಿಕಾರಿ ಸುದರ್ಶನ್ ದೊಡ್ಮನಿ ಮತ್ತು ಅವರ ತಂಡಅಕ್ರಮವಾಗಿ ಸಾಗಾಟ ಮಾಡುತ್ತಿರುವ ವಾಹನವನ್ನು ಬೆನ್ನಟ್ಟಿದಾಗ ಹೆಬ್ರಿ ಕನ್ಯಾನ ಕೊಳಗುಡ್ಡೆ ಬ್ಯಾಣ ಎಂಬಲ್ಲಿ ದನ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಅಂಗಡಿ ಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮುಂದೆ ವಾಹನ ಚಲಿಸದೆ ಇದ್ದಾಗ ಆರೋಪಿಗಳು ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ನಂತರ ಪೊಲೀಸರು ಅಕ್ರಮವಾಗಿ ಸಾಗಾಟ ಮಾಡಲು ಬಳಸಿದ್ದ ಪಿಕಪ್ ವಾಹನ ಮತ್ತು 14 ದನಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ 1 ದನ ಸಾವನ್ನಪ್ಪಿದ್ದು, ಮತ್ತೊಂದು ಗಂಭೀರವಾಗಿ ಗಾಯಗೊಂಡಿದೆ.
ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣಾಧಿಕಾರಿ ಸುದರ್ಶನ್ ದೊಡ್ಮನಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹೆಬ್ರಿ ಪೊಲೀಸರ ಕಾರ್ಯಾಚರಣೆಗೆ ಸ್ಥಳೀಯ ಬಿಜೆಪಿ ಮುಖಂಡರಾದ ರಮೇಶ್ ಕುಮಾರ್ ಶಿವಪುರ, ಸುಧಾಕರ್ ಹೆಗ್ಡೆ ಹೆಬ್ರಿ , ವಿಜಯ ಹೆಗ್ಡೆ , ದಿನೇಶ್ ಶೆಟ್ಟಿ , ಸುರೇಶ್ ಶೆಟ್ಟಿ ಶಿವಪುರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
