ಬೆಂಗಳೂರು: ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯ ಮಾಪನ ಕಾರ್ಯ ನಡೆಯುತ್ತಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 2ನೇ ವಾರದಲ್ಲಿ ಪ್ರಕಟಿಸಲಾಗುತ್ತದೆ. ಸದ್ಯಕ್ಕೆ ಕೊರೋನಾ ಕಡಿಮೆ ಇರೋ ಕಾರಣದಿಂದ ನಿಗದಿಯಂತೆ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ನಿಗದಿತ ಶೈಕ್ಷಣಿಕ ವೇಳಾಪಟ್ಟಿಯಂತೆ ಆರಂಭಗೊಳ್ಳಲಿವೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಸಲಹೆ ಆಧರಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಜೂನ್, ಜುಲೈ ನಲ್ಲಿ ಕೋವಿಡ್ ತೀವ್ರತೆ ಹೆಚ್ಚಳವಾಗಲಿದೆ ಎಂಬುದಾಗಿ ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಧರ್ಮದ ವಿಚಾರದಲ್ಲಿ ಒಡಕು ಸರಿಯಲ್ಲ:

ಇದೇ ವೇಳೆ ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಲಿಕೆ ಕಡ್ಡಾಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ವಿರುದ್ಧದ ನಡೆಯಾಗಿದೆ. ಶಾಲೆಗಳಲ್ಲಿ ಧರ್ಮದ ವಿಚಾರ ಬೋಧಿಸುವಂತಿಲ್ಲ. ಶಿಕ್ಷಣ ಇಲಾಖೆಯಿಂದ ಶಾಲೆಗೆ ನೋಟಿಸ್ ಜಾರಿಗೊಳಿಸಲಾಗಿದೆ. ಸಿಬಿಎಸ್ಇಗೂ ಪತ್ರ ಬರೆಯಲಾಗುತ್ತದೆ. ಧರ್ಮದ ಹೆಸರಿನಲ್ಲಿ ಒಡಕು ಸರಿಯಲ್ಲ ಎಂದರು.
ಇನ್ನು ಧರ್ಮದ ವಿಚಾರದಲ್ಲಿ ಒಡಕು ಎನ್ನುತ್ತಾರೆ. ಟಿಪ್ಪು, ಭಗವದ್ಗೀತೆ ವಿಚಾರ ಬಂದಾಗ ಮಾತನಾಡುತ್ತಾರೆ. ಈ ವಿಚಾರ ಬಂದಾಗ ಯಾಕೆ ಮೌನಿಯಾಗಿದ್ದಾರೆ ಎಂದು ಅವರು ವಿಪಕ್ಷಗಳ ಮೇಲೆ ಕಿಡಿ ಕಾರಿದ್ದಾರೆ.

