ತಮಿಳುನಾಡು: ತಂಜಾವೂರು ಜಿಲ್ಲೆಯಲ್ಲಿ ದೇವಸ್ಥಾನದ ರಥೋತ್ಸವದ ವೇಳೆ ಹೈ ಟೆನ್ಷನ್ ಟ್ರಾನ್ಸ್ಮಿಷನ್ ಲೈನ್ ಸಂಪರ್ಕಕ್ಕೆ ಬಂದು ಮೂವರು ಮಕ್ಕಳು ಸೇರಿದಂತೆ 11 ಜನರು ವಿದ್ಯುತ್ ಸ್ಪರ್ಶಿಸಿ ಸಾವನಪ್ಪಿದ್ದಾರೆ.
ಇಂದು ಮುಂಜಾನೆ ಸಮೀಪದ ಕಾಳಿಮೇಡು ಎಂಬಲ್ಲಿ ಅಪ್ಪರ್ ದೇವಸ್ಥಾನದ ರಥೋತ್ಸವ ನಡೆಯುತ್ತಿದ್ದಾಗ ಈ ದಾರುಣ ಘಟನೆ ನಡೆದಿದೆ.
ತಂಜಾವೂರಿನ ಅಪ್ಪರ ಸ್ವಾಮಿ ದೇವಾಲಯದಲ್ಲಿ ನಿನ್ನೆ ರಥೋತ್ಸವ ನಡೆಯುತ್ತಿತ್ತು. ಅಲಂಕೃತಗೊಂಡಿದ್ದ ರಥವನ್ನು ಗ್ರಾಮದ ಬೀದಿಗಳಲ್ಲಿ ಎಳೆಯಲಾಗುತ್ತಿತ್ತು. ಈ ವೇಳೆ ರಥಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.

ಮೃತರನ್ನು ಎಂ ಮೋಹನ್ (22), ಕೆ ಪ್ರತಾಪ್ (36), ಎ ಅನ್ಬಳಗನ್ (60), ಅವರ ಪುತ್ರ ರಾಘವನ್ (24), ಆರ್ ಸಂತೋಷ್ (15), ಟಿ ಸೆಲ್ವಂ (56), ಎಂ ರಾಜ್ಕುಮಾರ್ (14), ಆರ್ ಸ್ವಾಮಿನಾಥನ್ (56), ಎ ಗೋವಿಂದರಾಜ್, ಎಸ್ ಭರಣಿ (13), ನಾಗರಾಜ್ (60) ಎಂದು ಗುರ್ತಿಸಲಾಗಿದೆ. ಎಲ್ಲರೂ ಕಾಳಿಮೇಡು ಗ್ರಾಮದವರಾಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಸುಮಾರು 15 ಮಂದಿಗೆ ಸುಟ್ಟ ಗಾಯಗಳಾಗಿವೆ ಎನ್ನಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪ್ರಧಾನಿ ಘೋಷಣೆ:
ಘಟನೆಯಲ್ಲಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೂಡ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
