ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಆಪ್ತ ಛೋಟಾ ಶಕೀಲ್ ಪರ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮುಂಬೈಯಲ್ಲಿ ಬಂಧಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಡಿ-ಕಂಪನಿಯ ಮುಂಬೈ ಮೂಲದ ಇಬ್ಬರು ಸಹವರ್ತಿಗಳಾದ ಆರಿಫ್ ಅಬೂಬಕರ್ ಶೇಖ್ (59) ಮತ್ತು ಶಬ್ಬೀರ್ ಅಬೂಬಕರ್ ಶೇಖ್ (51) ಅವರನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಪಾಕಿಸ್ತಾನದಿಂದ ಅಂತಾರಾಷ್ಟ್ರೀಯ ಕ್ರಿಮಿನಲ್ ಸಿಂಡಿಕೇಟ್ ಅನ್ನು ನಿರ್ವಹಿಸುತ್ತಿರುವ ಛೋಟಾ ಶಕೀಲ್ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಆತ ಸುಲಿಗೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಹಿಂಸಾತ್ಮಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ದಾವೂದ್ ಇಬ್ರಾಹಿಂ ಮತ್ತು ಮುಂಬೈ ಮೂಲದ ಹವಾಲಾ ಆಪರೇಟರ್ಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಎನ್ಐಎ ಮುಂಬೈನ 20 ಸ್ಥಳಗಳಲ್ಲಿ ದಾಳಿ ನಡೆಸಿದ ಕೆಲವು ದಿನಗಳಲ್ಲಿ ಇಬ್ಬರನ್ನು ಬಂಧಿಸಿದೆ ಎನ್ನಲಾಗುತ್ತಿದೆ.
ಮುಂಬೈನಲ್ಲಿರುವ ದಾವೂದ್ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಎನ್ಐಎ ದಾವೂದ್ನ ಆಪ್ತ ಸಹಾಯಕ ಸಲೀಂ ಫ್ರೂಟ್ನನ್ನು ವಶಕ್ಕೆ ತೆಗೆದುಕೊಂಡಿದೆ. ಹಲವು ಹವಾಲಾ ಆಪರೇಟರ್ಗಳು ಮತ್ತು ಡ್ರಗ್ ಪೆಡ್ಲರ್ಗಳು ಇಬ್ರಾಹಿಂನೊಂದಿಗೆ ಸಂಬಂಧ ಹೊಂದಿದ್ದರು. ಫೆಬ್ರವರಿಯಲ್ಲಿ ಎನ್ಐಎ ಈ ಸಂಬಂಧ ಪ್ರಕರಣವನ್ನು ದಾಖಲಿಸಿದೆ.
ದಾವೂದ್ ವಿರುದ್ಧ ಏಜೆನ್ಸಿ ಈಗಾಗಲೇ ಪ್ರಕರಣಗಳನ್ನು ದಾಖಲಿಸಿದೆ. ಇಬ್ರಾಹಿಂ ಮತ್ತು ಇತರರು ಕಾನೂನುಬಾಹಿರ ಚಟುವಟಿಕೆಗಳ ತಡೆ (UAPA)ಕಾಯ್ದೆಯಡಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ, 1993 ರ ಮುಂಬೈ ಸರಣಿ ಸ್ಫೋಟದ ರೂವಾರಿಯಾಗಿದ್ದಾನೆ ಎನ್ನಲಾಗುತ್ತಿದೆ.

