ತುಮಕೂರು: ವಿವಾಹ ಬಂಧನಕ್ಕೊಳಪಡುವ ಸಂಭ್ರಮದಲ್ಲಿದ್ದ ಜೋಡಿ ಬದುಕು ದುರಂತ ಅಂತ್ಯ ಕಂಡಿದೆ. ಪ್ರಿಯಕರ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಪ್ರಿಯತಮೆ ಕೂಡ, ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರೋ ಧಾರುಣ ಘಟನೆ ತುಮಕೂರಿನ ಅರೆಹಳ್ಳಿಯಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ (23) ಹಾಗೂ ಅರೆಹಳ್ಳಿ ಗ್ರಾಮದ ಸುಷ್ಮಾ (22) ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯವನ್ನು ತಮ್ಮ ಮನೆಯಲ್ಲಿ ಹೇಳಿ, ಮದುವೆಗೂ ಒಪ್ಪಿಸಿದ್ದರು. ಮೇ.11ರಂದು ಊರಿನ ಜಾತ್ರೆಗೆ ಬರೋ ಸಂದರ್ಭದಲ್ಲಿ ನೆಲಮಂಗಲದ ಬಳಿಯ ಕುಲುವನಹಳ್ಳಿ ಬಳಿಯಲ್ಲಿ ಧುನುಷ್ ಅಪಘಾತಗೊಂಡು, ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಿಸದೇ ಧನುಷ್ ಮೃತಪಟ್ಟಿದ್ದಾರೆ.
ಇತ್ತ ಈ ವಿಷಯ ತಿಳಿಯುತ್ತಿದ್ದಂತ ಪ್ರಿಯತಮೆ ಸುಷ್ಮಾ ಕೂಡ, ಆಘಾತಗೊಂಡಿದ್ದಳು. ನಿನ್ನೆ ತನ್ನ ಪ್ರಿಯಕರ ಧುನುಷ್ ಅಂತ್ಯಸಂಸ್ಕಾರದಲ್ಲೂ ಭಾಗಿಯಾಗಿದ್ದಳು. ಧನುಷ್ ಅಂತ್ಯಕ್ರಿಯೆ ಮುಗಿಸಿ ಬಂದ ಬಳಿಕ ತನ್ನ ಮನೆಯಲ್ಲಿ, ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸುಷ್ಮಾ ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಧನುಷ್ ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ಇವರಿಬ್ಬರ ಪ್ರೀತಿಯ ವಿಚಾರ ತಿಳಿದ ಪೋಷಕರು ಮದುವೆ ನಿಶ್ಚಯ ಮಾಡಿದ್ದರು. ಅಷ್ಟರಲ್ಲೇ ಈ ದುರುಂತ ನಡೆದಿದೆ.


































