ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಓರ್ಥೋ ಡೋಕ್ಸ್ ಸಿರಿಯನ್ ಇಗರ್ಜಿಯಾದ ಸಾಸ್ತಾನ ಸೈಂಟ್ ಥೋಮಸ್ ಇಗರ್ಜಿಯು ನವೀಕೃತಗೊಂಡು ಮೇ 17 ಮತ್ತು 18 ರಂದು ಪವಿತ್ರೀಕರಣ ಹಾಗೂ ಉದ್ಘಾಟನಾ ಸಮಾರಂಭಕ್ಕಾಗಿ ಭಾನುವಾರ ಅಭೂತ ಪೂರ್ವ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.
ಮಾಬುಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ರಹ್ಮಾವರ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಹಸಿರು ನಿಶಾನೆ ನೀಡಿ ಮೆರವಣಿಗೆಗೆ ಚಾಲನೆ ನೀಡಿದರು.

ಭಾರತದ ಅತೀ ಪ್ರಾಚೀನ ಪರಂಪರೆಯ ಈ ಚರ್ಚ್ನ ಪ್ರಾರ್ಥನಾ ಕ್ರಮ ಪೂಜಾ ಕ್ರಮ ಕೂಡಾ ವಿಭಿನ್ನ. ಅದೇ ರೀತಿಯಲ್ಲಿ ಇಂದು ನಡೆದ ಹೊರೆಕಾಣಿಕೆ ಮೆರವಣಿಗೆ ಕೂಡಾ ವಿಭಿನ್ನವಾಗಿದೆ.

ಭಾರತೀಯ ಪರಂಪರೆಯಂತೆ ಕೃಷಿಕರು ಬೆಳೆದ ವಸ್ತುಗಳನ್ನು ಪ್ರಥಮವಾಗಿ ದೇವರಿಗೆ ಸಮರ್ಪಿಸುವಂತೆ ನಾನಾ ಭಾಗದಿಂದ ಬಂದ ಹಸಿರುಹೊರೆ ಕಾಣಿಕೆಯಲ್ಲಿ , ಹಣ್ಣು ,ತರಕಾರಿ , ತೆಂಗಿನಕಾಯಿ ಸೇರಿದಂತೆ ಹಲವಾರು ವಸ್ತುಗಳು ಟೆಂಪೋಗಳ ಮೂಲಕ ಸಾಗಿ ಬಂತು.
ಸಾಂಪ್ರದಾಯಕ ಭಾರತೀಯ ಉಡುಗೆ ತೊಟ್ಟ ಗಂಡಸರು ಮತ್ತು ಮಹಿಳೆಯರು , ಬ್ಯಾಂಡ್ ವಾದ್ಯಗಾರರು 3 ಕಿಮಿ ದೂರದ ತನಕ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊರೆಕಾಣಿಕೆ ಮೆರವಣಿಗೆ ಮೆರುಗು ನೀಡಿತ್ತು.

ಕಂಬಳದ ಕೋಣ , ಚಂಡೆ ವಾದನ ದ ಜೊತೆ ಯುವತಿಯೋರ್ವಳು ಕೃಷಿ ಸಂಸ್ಕೃತಿಯನ್ನು ಬಿಂಬಿಸಲು ಚಿಕ್ಕ ಟ್ರ್ಯಾಕ್ಟರೊಂದನ್ನು ಮೆರವಣಿಗೆಯಲ್ಲಿ ಚಲಾಯಿಸಿಕೊಂಡು ಬಂದು ಸಾರ್ವಜನಿಕರ ಗಮನ ಸೆಳೆದಳು.

ಸಾಸ್ತಾನ ಚರ್ಚ್ ನ ಫಾದರ್ ನೋವೇಲ್ ಲೂಯಿಸ್ , ಮತ್ತು ನಾನಾ ಭಾಗದ ಧರ್ಮಗುರುಗಳು ಹೊರೆಕಾಣಿಕೆ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.



ಜೀಣೋದ್ಧಾರದ ಅಧ್ಯಕ್ಷ ಮೋಸೆಸ್ ರೋಡ್ರಿಗಸ್ , ಕಾರ್ಯದರ್ಶಿ ರೋಬರ್ಟ್ ರೋಡ್ರಿಗಸ್ , ಖಜಾಂಚಿ ಜೇರಾಲ್ಡ್ ರೋಡ್ರಿಗಸ್ ಮತ್ತು ಟ್ರಸ್ಟಿ ಲಾರೆನ್ಸ್ ಅಲ್ಮೇಡಾ , ಮಿಲ್ಟನ್ ಅಲ್ಮೇಡಾ ಹಾಗೂ ಹಲವಾರು ಮಂದಿ ಉಪಸ್ಥಿತರಿದ್ದರು.
ಮೇ 17 ಮತ್ತು 18 ರಂದು ಸಹಸ್ರಾರು ಮಂದಿಯ ಸಾರ್ವಜನಿಕ ಅನ್ನ ಸಂತರ್ಪಣೆ ಕೂಡಾ ನಡೆಯಲಿದೆ.





































