ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಬ್ರಹ್ಮಾವರ ಸರಕಾರಿ ಪ್ರಾಥಮಿಕ, ಪ್ರೌಢ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಇದನ್ನು ದತ್ತು ಸ್ವೀಕಾರ ಗೊಳ್ಳುವ ಕುರಿತು ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಶನಿವಾರ ಶಾಲೆಯಲ್ಲಿ ಸಭೆ ಜರುಗಿತು.
ಉಡುಪಿ ವಲಯ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಶಾಲೆಯ ಮಾಹಿತಿಯನ್ನು ಸಭೆಯ ಮುಂದೆ ನೀಡಿದರು. ಈ ಭಾರಿಯ ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ 600 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.


ಇದೇ ಸಂದರ್ಭದಲ್ಲಿ ಸರಕಾರಿ ಶಾಲೆಯೊಂದು ಅತೀ ಹೆಚ್ಚು ವಿದ್ಯಾರ್ಥಿಗಳು ಇದ್ದು ಹಲವು ಕೊರತೆಗಳನ್ನು ಎದುರಿಸುತ್ತಿರುವುದನ್ನು ಮನಗಂಡು ಸಭೆಯಲ್ಲಿ ಹಾಜರಿದ್ದ ಮೈಸೂರು ಮರ್ಕೆಂಟೈಲ್ ಕಂಪನಿಯ ಹೆಚ್. ಶ್ರೀನಿವಾಸ್ ಶೆಟ್ಟಿ ಶಾಲೆಯ ಅಭಿವೃದ್ಧಿಗೆ ರೂ. 2 ಕೋಟಿ ಹಣವನ್ನು ದೇಣಿಗೆಯಾಗಿ ನೀಡುವುದಾಗಿ ತಿಳಿಸಿದರು.

ಇನ್ನೊರ್ವ ದಾನಿಗಳಾದ ನಾಗರಾಜ್ ಶೆಟ್ಟಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಎಸ್.ಡಿ.ಎಂ.ಸಿ ಪ್ರಾಥಮಿಕ ವಿಭಾಗದ ಉಪಾಧ್ಯಕ್ಷ ಪಾಂಡುರಂಗ, ಎಸ್.ಡಿ.ಎಂ.ಸಿ ಪ್ರೌಢಶಾಲಾ ವಿಭಾಗದ ಉಪಾಧ್ಯಕ್ಷ ರಘುಪತಿ ಬ್ರಹ್ಮಾವರ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪಂಚಮಿ ಮೋಹನ್ ಶೆಟ್ಟಿ, ಶಾಲೆಯ ಸಂಸ್ಥಾಪಕರಾದ ಭಾಸ್ಕರ್ ರೈ, ಬ್ರಹ್ಮಾವರ ವಲಯ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಟಿ ನಾಯ್ಕ್, ಡಯಟ್ ಹಿರಿಯ ಉಪನ್ಯಾಸಕರು ಎಸ್.ಡಿ.ಎಂ.ಸಿ ಮತ್ತು ಸಿ.ಡಿ.ಸಿ ಸದಸ್ಯರು, ಪೋಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.


































