ಕೊಪ್ಪಳ : ಊಟ ಕೊಡಲಿಲ್ಲವೆಂದು ಅಪರಿಚಿತರು ಹೋಟೇಲಿಗೆ ಬೆಂಕಿ ಹಚ್ಚಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ.
ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿರುವ ಹೋಟೆಲೊಂದಕ್ಕೆ ರಾತ್ರಿ 11.30ರ ಸುಮಾರಿಗೆ ಅಪರಿಚಿತರ ಗುಂಪೊಂದು ಬಂದಿದ್ದು, ಈ ವೇಳೆ ಊಟ ಕೇಳಿದ್ದಾರೆ.
ಇಷ್ಟು ಹೊತ್ತಿನವರೆಗೂ ಊಟ ಎಲ್ಲಿರುತ್ತೆ? ಊಟ ಕೊಡಲಾಗುವುದಿಲ್ಲ ಎಂದಿದ್ದಾರೆ ಹೋಟೆಲಿನವರು. ಇದರಿಂದ ಕೋಪಗೊಂಡ ಕಿಡಿಗೇಡಿಗಳು ಅಡುಗೆ ಸಿಬ್ಬಂದಿಗೆ ಗೊತ್ತಾಗದಂತೆ ಕೋಣೆಯ ಬಾಗಿಲು ಹಾಕಿ ಹೊರಗಿನಿಂದ ಚಿಲಕ ಹಾಕಿ ಕೂಡಿ ಹಾಕಿದ್ದಾರೆ.

ನಂತರ ಹೋಟೆಲ್ ನಲ್ಲಿದ್ದ ನೀರಿನ ಸಂಪರ್ಕ ಕಡಿತಗೊಳಿಸಿ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಹೋಟೆಲ್ ಗುಡಿಸಲು ಮಾದರಿಯಲ್ಲಿದ್ದ ಕಾರಣ 11 ಕೊಠಡಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ.
ಅಡುಗೆ ಕೋಣೆಯಲ್ಲಿ ಬಂಧಿಯಾಗಿದ್ದ ಅಡುಗೆ ಸಿಬ್ಬಂದಿ ಆನೆಗೊಂದಿ ಗ್ರಾಮಸ್ಥರಿಗೆ ಕರೆ ಮಾಡಿ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಗ್ರಾಮಸ್ಥರು ಸಕಾಲಕ್ಕೆ ಬಂದಿದ್ದರಿಂದ ಅಡುಗೆ ಸಿಬ್ಬಂದಿಯ ಪ್ರಾಣ ಉಳಿದಿದೆ.
ಇನ್ನೂ ಅಪರಿಚಿತರು ಹೋಟೆಲ್ಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

