ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ:ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ (ಕಟ್ಟೆ ಭೋಜಣ್ಣ (೭೯) )ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರನ್ನು ಶುಕ್ರವಾರ ಕುಂದಾಪುರ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇನ್ನೋರ್ವ ಆರೋಪಿ ಎಚ್. ಇಸ್ಮಾಯಿಲ್ಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ.
ಉದ್ಯಮಿ ಗಣೇಶ್ ಶೆಟ್ಟರನ್ನು ಜೆಎಂಎಫ್ಸಿ ನ್ಯಾಯಾದಿಶೆ ರೋಹಿಣಿ ಅವರ ನಿವಾಸದಲ್ಲಿಯೇ ಹಾಜರುಪಡಿಸಿದ್ದು, ನ್ಯಾಯಾದಿಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಕೋಟ್ಯಾಧಿಪತಿ ಕಟ್ಟೆ ಗೋಪಾಲಕೃಷ್ಣ ರಾವ್ ಅವರು ಮೇ ೨೬ ರ ಬೆಳಗ್ಗೆ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಯ ಸಿಟೌಟ್ನಲ್ಲಿ ತನ್ನ ಪಿಸ್ತೂಲಿನಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದ ಡೆತ್ನೋಟ್ ಪ್ರಕಾರ ಗಣೇಶ್ ಶೆಟ್ಟಿ ಹಾಗೂ ಎಚ್. ಇಸ್ಮಾಯಿಲ್ ಅವರು ಗೋಲ್ಡ್ ಜುವೆಲ್ಲರಿ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ೩.೩೪ ಕೋ.ರೂ., ೫ ಕೆ.ಜಿ ಚಿನ್ನ ಪಡೆದುಕೊಂಡಿದ್ದರು. ಇದರ ಬಡ್ಡಿ, ಅಸಲೆಲ್ಲ ಸೇರಿ ಈಗ ೯ ಕೋ.ರೂ. ಆಗಿದ್ದು, ಇದನ್ನು ನೀಡದೇ ಮೋಸ ಮಾಡಿರುವುದಾಗಿ ಬರೆದುಕೊಂಡಿದ್ದರು. ಇದೇ ಕಾರಣಕ್ಕಾಗಿ ಅವರ ಮನೆಗೆ ಹೋಗಿ ಗೋಪಾಲಕೃಷ್ಣ ಅವರು ಅಲ್ಲಿ, ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

































