ಬೆಂಗಳೂರು : ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದ ನಟ ಸತೀಶ್ ವಜ್ರ ಅವರ ಕೊಲೆ ಮಾಡಲಾಗಿದೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಪಟ್ಟಣಗೆರೆಯಲ್ಲಿ ಸತೀಶ್ ತಮ್ಮ ಬಾಮೈದನಿಂದಲೇ ಹತ್ಯೆಗೀಡಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಮುಂದುವರೆದಿದೆ.
ನಟ ಸತೀಶ್ ವಜ್ರ ಅವರು ತಮ್ಮ ಮನೆಯಲ್ಲಿ ಇದ್ದ ವೇಳೆ ಮನೆಗೆ ಬಂದ ಬಾಮೈದನು ಸತೀಶ್ ಚಾಕುವಿನಿಂದ ಇರಿದಿದ್ದಾನೆ. ಸತೀಶ್ ದೇಹಕ್ಕೆ ಹಲವು ಬಾರಿ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ರಸ್ರಾವ ಉಂಟಾಗಿ ಸತೀಶ್ ವಜ್ರ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 7 ತಿಂಗಳ ಹಿಂದೆ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಸಹೋದರಿಯ ಹತ್ಯೆಗೆ ಸತೀಶ್ ಬಾಮೈದ ಸೇಡು ತೀರಿಸಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ರಾಜ ರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಲಗೋರಿ ಕಿರುಚಿತ್ರದಲ್ಲಿ ಸತೀಶ್ ವಜ್ರ ನಟಿಸಿದ್ದರು. ಸತೀಶ್ ವಜ್ರ ಅವರ ಯೂಟ್ಯೂಬ್ ಚಾನೆಲ್ ಮೂಲಕವೇ ಈ ಕಿರುಚಿತ್ರ ರಿಲೀಸ್ ಆಗಿತ್ತು. 20 ಲಕ್ಷಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆ ಕಂಡಿದ್ದು, ಸತೀಶ್ ಅವರ ಯೂಟ್ಯೂಬ್ ಚಾನೆಲ್ ಗೆ 1 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ.