ಬೆಂಗಳೂರು : ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ‘ಕಾಶಿ ಯಾತ್ರೆ’ ಗೆ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿ ಸರಕಾರದಿಂದ ಅಂತಿಮ ಆದೇಶ ಹೊರಡಿಸಲಾಗಿದೆ.
ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿಗಳಂತೆ ಸಹಾಯಧನ ನೀಡುವ ಯೋಜನೆಗೆ ಮಾರ್ಗಸೂಚಿಗಳನ್ನು ಇಂದು ಅಂತಿಮಗೊಳಿಸಲಾಗಿದೆ. ಸರಕಾರದಿಂದ ಅಧಿಕೃತವಾಗಿ ಆದೇಶ ಹೊರಡಿಸಲಾಗಿದ್ದು, ಏಪ್ರಿಲ್ 1, 2022 ಕ್ಕೆ ಪೂರ್ವಾನ್ವಯವಾಗುವಂತೆ ಈ ಆದೇಶವನ್ನು ಹೊರಡಿಸಲಾಗಿದೆ. ಸೂಕ್ತ ದಾಖಲಾತಿಗಳೊಂದಿಗೆ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದೆ.
ಯಾತ್ರಿಕರು ಆಯಾ ವರ್ಷದ ಏಪ್ರಿಲ್ 1 ಕ್ಕೆ 18 ವರ್ಷ ಮೇಲ್ಪಟ್ಟಿರಬೇಕು. ಈ ಸಂಬಂಧ ವೋಟರ್ ಐಡಿ, ಆಧಾರ್ ಕಾರ್ಡ್, ಪಡಿತರ ಚೀಟಿ ಹೊಂದಿರಬೇಕು. ಯಾತ್ರಿಕರು ವಯಸ್ಸಿನ ಸಂಬಂಧ ಸೂಕ್ತ ದಾಖಲೆ ಹಾಜರುಪಡಿಸಬೇಕು ಎಂದು ತಿಳಿಸಲಾಗಿದೆ.

ಇದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಆಧಾರ್ ಲಿಂಕ್ ಆಗಿರುವ ಖಾತೆಯನ್ನು ಹೊಂದಿರಬೇಕು. ಏಪ್ರಿಲ್ 1 ರಿಂದ ಜೂನ್ 30 ರೊಳಗೆ ಕಾಶಿಗೆ ತೆರಳಿದ್ದ ಸಂಬಂಧ ದಾಖಲೆ ಇರಬೇಕು. ಧಾರ್ಮಿಕ ಧತ್ತಿ ಇಲಾಖೆ ಕಚೇರಿಗೆ ಯಾತ್ರಿಕರು ದಾಖಲೆ ಸಲ್ಲಿಸಬೇಕು. ಒಂದು ಬಾರಿ ಸಹಾಯಧನ ಪಡೆದವರು 2ನೇ ಬಾರಿಗೆ ಅವಕಾಶ ಇಲ್ಲ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.