ವರದಿ : ಶ್ರೀದತ್ತ ಹೆಬ್ರಿ
ಮುನಿಯಾಲು : ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್- ಗೋಧಾಮವನ್ನು ಪ್ರಕೃತಿ ರಮಣೀಯ ತಾಣದ ನಡುವೆ ಗೋಧಾಮವನ್ನು ಅತ್ಯುತ್ತಮವಾಗಿ ಸ್ಥಾಪಿಸಿದ್ದ ಗೋಧಾಮ ಮನಸ್ಸಿಗೆ ಶಾಂತಿ ನೆಮ್ಮದಿ ನೀಡಿದೆ. ಭಾರತೀಯ ಗೋತಳಿಯ ಅಭಿವೃದ್ದಿಯ ಜೊತೆಗೆ ಗೋತಳಿಗಳ ಸಂರಕ್ಷಣೆ ಅತ್ಯಂತ ಪುಣ್ಯ ಮತ್ತು ಮಹತ್ವದ ಕಾರ್ಯದ ಸುದ್ದಿ ತಿಳಿದು ಗೋಧಾಮದ ಸದಸ್ಯೆಯಾಗಿ ನನ್ನ ತಂದೆ ತಾಯಿ ಹೆಸರಿನಲ್ಲಿ ಗೋವನ್ನು ದತ್ತು ಪಡೆದು ಪೂಜಿಸುತ್ತಿದ್ದೇನೆ. ಇದು ನನ್ನ ಜೀವನದ ಸಾರ್ಥಕ ಕ್ಷಣ ಮತ್ತು ಪುಣ್ಯಭೂಮಿ ಗೋಧಾಮದ ಭೇಟಿ ಮರೆಯಲಾಗದ ಕ್ಷಣ ಎಂದು ಬೆಂಗಳೂರು ಮೂಲದ ಅಮೇರಿಕಾ ವಾಸಿ ವೀಣಾ ವೆಂಕಟ್ರಾಮಯ್ಯ ಹೇಳಿದರು.
ಅವರು ಬುಧವಾರ ತಮ್ಮ ಕೌಟುಂಬಿಕ ತಂಡದೊಂದಿಗೆ ಹೆಬ್ರಿ ತಾಲ್ಲೂಕಿನ ಮುನಿಯಾಲಿನಲ್ಲಿರುವ ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ – ಗೋಧಾಮಕ್ಕೆ ಭೇಟಿ ನೀಡಿ ದೇಶಿಯ ಗೋತಳಿಗಳು, ಗೋವಿನ ಇತರ ಉತ್ಪನ್ನಗಳ ಅಧ್ಯಯನ ನಡೆಸಿ ಬಳಿಕ ಗೋಪೂಜೆ ಸಲ್ಲಿಸಿ ಮಾತನಾಡಿದರು.

ವಿಶಾಲವಾದ ಗೋಧಾಮದಲ್ಲಿ ಭಾರತೀಯ ಗೋತಳಿಗಳು, ಗೋವಿನ ಇತರ ಉತ್ಪನ್ನಗಳು, ಗೋವು ಆಧಾರಿತ ಕೃಷಿ ಪದ್ಧತಿ,ಸಾವಯವ ಕೃಷಿ ಪದ್ಧತಿಯ ಸಹಿತ ಸಮಗ್ರ ಅಧ್ಯಯನ ನಡೆಸಿದರು. ಮುನಿಯಾಲು ಗೋಧಾಮದಲ್ಲಿ ಅದ್ಬುತ ಅನುಭವವಾಗಿದೆ ಎಂದು ವೀಣಾ ವೆಂಕಟ್ರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿ, ತನ್ನ ಮಗಳು ಅನನ್ಯ ಅವರ ಹುಟ್ಟುಹಬ್ಬವನ್ನು ಗೋಮಾತೆಯ ಪೂಜೆಯೊಂದಿಗೆ ಆಚರಿಸಿ ಸಂಭ್ರಮಿಸಿದರು.
ಗೋಧಾಮದಲ್ಲಿ ಗೋಪಾಲಕೃಷ್ಣ ದೇವರು ಮತ್ತು ಗೋವಿನ ಪೂಜೆ ನೆರವೇರಿಸಿದರು. ಔಷಧೀಯ ಸಸ್ಯಗಳು ಮತ್ತು ದೇವರಿಗೆ ಪ್ರಿಯವಾದ ಹೂ ಮತ್ತು ಗಿಡಮರಗಳ ನಡುವಿನ ಪುರಾತನ ಶೈಲಿಯ ನಾಗದೇವರ ಬನಕ್ಕೆ ಭೇಟಿ ನೀಡಿದರು.
ಮುನಿಯಾಲು ಸಂಜೀವಿನಿ ಫಾರ್ಮ್ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಗೋಧಾಮ ನಮ್ಮ ಮುಂದಿನ ಯುವಸಮುದಾಯಕ್ಕೆ ಇನ್ನು ಹಳ್ಳಿಯ ಜೀವನ ಅನಿವಾರ್ಯವಾಗಲಿದೆ. ಅವರಿಗೆ ಗೋಧಾಮ ಬದುಕಿನ ಪಾಠ ಕಲಿಸುತ್ತದೆ. ದೇಶ ವಿದೇಶಗಳ ನಗರ ಜೀವನ ಬಯಸುವ ಯುವಜನತೆಯನ್ನು ಸಾವಯವ ಕೃಷಿ ಮತ್ತು ದೇಶಿಯ ಗೋತಳಿಗಳ ಹೈನುಗಾರಿಕೆಯತ್ತ ಆಕರ್ಷಿಸಿ ಬದುಕು ಕಟ್ಟಿಕೊಳ್ಳಲು ಪ್ರೇರೆಪಿಸುತ್ತದೆ. ಗೋಧಾಮದ ಭೇಟಿ ತಾಯಿನಾಡಿಗೆ ಬಂದು ತಾಯಿಯನ್ನು ಪೂಜಿಸಿದ ಅನುಭವ, ಜೀವನದ ಮರೆಯಲಾಗದ ಕ್ಷಣ ಎಂದು ಖುಷಿ ಪಟ್ಟರು.
ವಿದೇಶದವರು ಕೂಡ ನಮ್ಮ ಗೋಧಾಮದ ಬಗೆಗೆ ತಿಳಿದು ಬಂದು ಅಧ್ಯಯನ ನಡೆಸಲು ಉದ್ದೇಶಿಸಿರುವುದು ನಮ್ಮ ಉದ್ದೇಶ ಸ್ವಷ್ಟವಾಗಿರುವ ಸಂಕೇತ ಮತ್ತು ನಮ್ಮ ಶ್ರಮ ಸಾರ್ಥಕವಾದ ಭಾವ ಮೂಡಿದೆ ಎಂದು ಗೋಧಾಮದ ಸಂಸ್ಥಾಪಕರಾದ ಜಿ. ರಾಮಕೃಷ್ಣ ಆಚಾರ್ ಕೃತಜ್ಞತೆ ಸಲ್ಲಿಸಿದರು.
ಮುನಿಯಾಲು ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್- ಗೋಧಾಮದ ಕಾರ್ಯದರ್ಶಿ ಸವಿತಾ ಆರ್. ಆಚಾರ್ ಮುಂತಾದವರು ಉಪಸ್ಥಿತರಿದ್ದರು.

