ಹುಬ್ಬಳ್ಳಿ: ಖಾಸಗಿ ಹೋಟೆಲ್ ನಲ್ಲಿ ಖ್ಯಾತ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ್ ಗುರೂಜಿಯನ್ನು 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಂತ ಹಂತಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಜುನಾಥ್, ಮಹಾಂತೇಶ್ ಬಂಧಿತರು. ಇವರೊಂದಿಗೆ ಮಹಾಂತೇಶ್ ಪತ್ನಿ ವನಜಾಕ್ಷಿಯನ್ನೂ ವಶಕ್ಕೆ ಪಡೆಯಲಾಗಿದೆ.
ಚಂದ್ರಶೇಖರ್ ಗುರೂಜಿ ಅವರ ಹುಬ್ಬಳ್ಳಿಯ ಆಪ್ತನಾಗಿದ್ದಂತ ಮಹಾಂತೇಶ್ ಶಿರೋಳ್ ಎಂಬಾತನ ಪತ್ನಿ ವನಜಾಕ್ಷಿಯ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಬಳಿಯಲ್ಲಿರುವಂತ ಅಪಾರ್ಮೆಂಟ್ ಸಹ ಆಕೆಯ ಹೆಸರಿಗೆ ನೋಂದಣಿ ಮಾಡಿಸಿದ್ದರು ಎನ್ನಲಾಗಿದೆ.
ಇದಷ್ಟೇ ಅಲ್ಲದೇ ಹಲವು ಆಸ್ತಿ ನೋಂದಣಿ, ಹಣಕಾಸಿನ ವ್ಯವಹಾರವನ್ನು ತನ್ನ ಆಪ್ತ ಮಹಾಂತೇಶ್ ಪತ್ನಿ ವನಜಾಕ್ಷಿ ಹೆಸರಿನಲ್ಲಿ ಮಾಡಿದ್ದರು ಎನ್ನಲಾಗಿದೆ. ಇದೇ ಸಂಬಂಧ ಗಲಾಟೆ ನಡೆದಾಗ 2019ರಲ್ಲಿ ಸರಳವಾಸ್ತು ಸಂಸ್ಥೆಯ ಉದ್ಯೋಗಿಯಾಗಿದ್ದಂತ ವನಜಾಕ್ಷಿಯನ್ನು ಕೆಲಸ ಬಿಟ್ಟಿದ್ದರು ಎನ್ನಲಾಗಿದೆ. ಈ ಬಳಿಕ ತಾನು ಮಾಡಿಸಿಕೊಟ್ಟಿದ್ದಂತ ಆಸ್ತಿಯನ್ನು ವಾಪಾಸ್ ಕೊಡುವಂತೆ ಕೇಳಿದಾಗ ಚಂದ್ರಶೇಖರ್ ಗೂರೂಜಿ ಹಾಗೂ ವನಜಾಕ್ಷಿ, ಆಕೆಯ ಪತಿ ಮಹಾಂತೇಶ್ ನಡುವೆ ಗಲಾಟೆ ಆಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಕೊಲೆ ನಡೆದಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ತನಿಖೆ ಮುಂದುವರೆದಿದೆ.
