ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಿಲ್ಲಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಯುವ ಸಂಘಟಕ, ನಾಯಕತ್ವದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಇವರು ಭಾರತೀಯ ಜನತಾ ಪಕ್ಷದ ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸಿನ ಮೇರೆಗೆ ಪಂಚಾಯತ್ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ.ಎಂ ನಾರಾಯಣ ಸ್ವಾಮಿ ಅವರು ಪ್ರಥ್ವಿರಾಜ್ ಶೆಟ್ಟಿಯವರನ್ನು ಹುಬ್ಬಳ್ಳಿ – ಧಾರವಾಡ ವಿಭಾಗದ ಪ್ರಭಾರಿಗಳಾಗಿ ಆಯ್ಕೆ ಮಾಡಿರುತ್ತಾರೆ.

ಉಡುಪಿ ಪೇಜಾವರ ಮಠದ ಹಿರಿಯ ಸ್ವಾಮೀಜಿಯವರಿಂದ ಅನಾಥ ಗೋವುಗಳ ನೀಲಾವರ ಗೋಶಾಲೆಗೆ ೨ವರ್ಷದ ಹಿಂದೆ ಹಸುಗಳಿಗೆ ಮೇವು ಕೊರತೆ ಕಂಡು ಬಂದಾಗ ಪ್ರಥ್ವಿರಾಜ್ ಶೆಟ್ಟಿ ನಾಡಿನಾದ್ಯಂತ ಯುವಕರನ್ನು ಸಂಘಟಿಸಿ ಗೋವಿಗಾಗಿ ಮೇವು ಎನ್ನುವ ವಿನೂತನ ಪರಿಕಲ್ಪನೆಯ ಅಭಿಯಾನವನ್ನು ಆರಂಭಿಸಿ, ಮಾರ್ಗದ ಬದಿಯಲ್ಲಿ ಸಿಕ್ಕಾಪಟ್ಟೆ ಬೆಳೆದು ನಿಂತಿರುವ ಹಸಿ ಹುಲ್ಲುಗಳನ್ನು ಕಟಾವು ಮಾಡಿ ರಾಜ್ಯದಾದ್ಯಂತ ಮೇವು ಸಂಗ್ರಹ ಮಾಡಿ ನೀಲಾವರ ಗೋಶಾಲೆಗೆ ತಂದು ನೀಡುವ ಬೃಹತ್ ಕಾರ್ಯದಿಂದ ರಾಜ್ಯದಾದ್ಯಂತ ಸಂಘಟನಾ ಚಾತುರ್ಯವನ್ನು ಬಿಂಬಿಸಿದ್ದರು.
೬೦ ವರ್ಷದಿಂದ ಪೂಜೆ ಇಲ್ಲದೆ ದೇವಸ್ಥಾನದ ಅವಶೇಷ ಮಾತ್ರ ಇದ್ದ, ಪುರಾತನ ಕದ್ರಂಜೆ ಶ್ರೀ ಮಹಾಲಿಗೇಶ್ವರ ದೇವಸ್ಥಾನವನ್ನು ೪ ಕೋಟಿ ರೂ ವೆಚ್ಛದಲ್ಲಿ ಪುನರುತ್ಥಾನ ಮತ್ತು ಜೀರ್ಣೋದ್ಧಾರದ ನೇತೃತ್ವ ವಹಿಸಿ ಇದೀಗ ದೇವಸ್ಥಾನ ನಿರ್ಮಾಣದ ಹಂತದಲ್ಲಿದ್ದು ಧಾರ್ಮಿಕವಾಗಿ ಕೂಡಾ ತೊಡಗಿಸಿಕೊಂಡಿದ್ದಾರೆ.
ಬಾರಕೂರು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ನಾಯಕನಾಗಿ, ಕೂರಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯನ್ನು , ಬಿಲ್ಲಾಡಿಯಲ್ಲಿ ಶಾರದೋತ್ಸವನ್ನು ಸ್ಥಾಪಿಸಿ ಜಿಲ್ಲಾ ಜಾನಪದ ಕ್ರೀಡೆ ಕಂಬಳ ಸಮಿತಿ ಸೇರಿದಂತೆ ಹಲವಾರು ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಯಲ್ಲಿ ಗುರುತಿಸಿಕೊಂಡ ಸಮರ್ಥ ನಾಯಕತ್ವದಿಂದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಮಾಜಿ ಉಪಾಧ್ಯಕ್ಷರಾಗಿ ಜನಾನುರಾಗಿಯಾದ ಪ್ರಥ್ವಿರಾಜ್ ಶೆಟ್ಟಿ ಯವರನ್ನು ಗುರುತಿಸಿ ರಾಜ್ಯ ಬಿಜೆಪಿ ಈ ಹೊಣೆಗಾರಿಕೆಯನ್ನು ನೀಡಿದೆ.
