ಚಂದನವನ : 53 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಮೇಕಪ್ ಮ್ಯಾನ್ ಎಂ.ಎಸ್. ಕೇಶವಣ್ಣ ಅವರು ಇಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಎರಡು ದಿನಗಳಿಂದ ಅವರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೇಶವಣ್ಣ ಅವರು ಮೈಸೂರಲ್ಲಿ ಇಂದು ಮಧ್ಯಾಹ್ನ 1:40ಕ್ಕೆ ಕೊನೆಯುಸಿರೆಳೆದಿದ್ದಾರೆ.
ರಾಜ್ ಕುಮಾರ್, ಅಂಬರೀಷ್, ರಜನಿಕಾಂತ್, ಪುನೀತ್ ರಾಜ್ ಕುಮಾರ್, ಅನಂತ್ ನಾಗ್, ಶಿವರಾಜ್ ಕುಮಾರ್ ಮೊದಲಾದ ಸ್ಟಾರ್ ನಟರಿಗೆ ಅವರು ಮೇಕಪ್ ಮಾಡಿದ್ದರು.

ಕೇಶವಣ್ಣ ಅವರು 25-30 ವರ್ಷಗಳ ಕಾಲ ರಾಜ್ಕುಮಾರ್ ಅವರ ಕಂಪನಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿದ್ದರು. ಇವರ ಮೊದಲು ಮೇಕಪ್ ಮಾಡಿದ್ದು ಹಾಸ್ಯ ಕಲಾವಿದ ನರಸಿಂಹ ರಾಜು ಅವರಿಗೆ ಅನ್ನೋದು ವಿಶೇಷ. ಪೃಥ್ವಿ ರಾಜ್ ಕಪೂರ್, ಬಾಲಣ್ಣ, ಉದಯ ಕುಮಾರ್, ವಜ್ರಮುನಿ ಸೇರಿ ಇನ್ನೂ ಅನೇಕ ಕಲಾವಿದರಿಗೆ ಕೇಶವಣ್ಣ ಮೇಕಪ್ ಮಾಡಿದ್ದಾರೆ.
ಅಲ್ಲದೇ, ಅನಂತ್ ನಾಗ್ ಅವರ ‘ನಾನಿನ್ನ ಬಿಡಲಾರೆ’ ಸಿನಿಮಾದಲ್ಲಿ ನಟಿಸಿದ್ದರು. ಕೇಶವಣ್ಣ ಈ ಚಿತ್ರದಲ್ಲಿ ಅನಂತ್ ನಾಗ್ ಅವರಿಗೆ ದೆವ್ವದ ಮೇಕಪ್ ಹಾಕಿದ್ದರು. ಈ ಮೇಕಪ್ ಮೆಚ್ಚುಗೆಗೆ ಪಾತ್ರವಾಗಿತ್ತು.
ಸಾಕ್ಷಾತ್ಕಾರ’, ‘ಹುಲಿಯ ಹಾಲಿನ ಮೇವು’,‘ಮಯೂರ’, ‘ಶಾಂತಿ ಕ್ರಾಂತಿ’, ‘ಸಂಗೊಳ್ಳಿ ರಾಯಣ್ಣ’ ಮೊದಲಾದ ಚಿತ್ರಗಳಲ್ಲಿ ಕೇಶವಣ್ಣ ಕೆಲಸ ಮಾಡಿದ್ದಾರೆ. ಇವರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ ಕೊನೆಯ ಚಿತ್ರ ‘ಕುರುಕ್ಷೇತ್ರ’ ಆಗಿದೆ.

