ಉಡುಪಿ : ಅಸಂಘಟಿತ ಕಾರ್ಮಿಕರಾಗಿರುವ ಟೈಲರ್ ವೃತ್ತಿ ಬಾಂಧವರು ಸಾಮಾಜಿಕ ಭದ್ರತೆಗಾಗಿ ಇಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ನಡೆಸಲುದ್ದೇಶಿಸಿರುವ ಧರಣಿಯನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ಬೆಂಬಲಿಸುತ್ತದೆ.
ಸಿಐಟಿಯು ಮತ್ತಿತರ ಕಾರ್ಮಿಕ ಸಂಘಟನೆಗಳ ಒತ್ತಾಯದ ಮೇರೆಗೆ ಈ ಹಿಂದಿನ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಮಂಡಳಿ ರಚಿಸಿ ಹಲವಾರು ವರ್ಷಗಳು ಕಳೆದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಅನುದಾನ ನೀಡಿರಲಿಲ್ಲ. ಇದರಿಂದಾಗಿ ಕೆಲವೇ ಕೆಲವು ಸವಲತ್ತುಗಳು ಮಾತ್ರ ದೊರಕುತ್ತಿವೆ.
ಸಿಐಟಿಯು ಪ್ರತಿ ಅಖಿಲ ಭಾರತ ಮುಷ್ಕರದಲ್ಲಿ ಮತ್ತು ಸಮ್ಮೇಳನಗಳಲ್ಲಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ, ವೈದ್ಯಕೀಯ ಚಿಕಿತ್ಸೆ ಪರಿಹಾರ, ಪೆನ್ಷನ್ ಮತ್ತಿತರ ಬೇಡಿಕೆಗಳನ್ನು ಮುಂದಿಡಲಾಗುತ್ತಿದ್ದರೂ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಸಂಕಷ್ಟಕ್ಕೊಳಗಾದ ಟೈಲರ್ಸ್ ವ್ರತ್ತಿ ಬಾಂಧವರು ಹೋರಾಟಕ್ಕೆ ಕರೆ ಕೊಟ್ಟಿರುವುದನ್ನು ಸಿಐಟಿಯು ಸ್ವಾಗತಿಸುತ್ತದೆ. ನಾಗರಿಕತೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಟೈಲರ್ಸ್ ವ್ರತ್ತಿದಾರರಿಗೆ ಸರಕಾರ ಕೂಡಲೇ ಅನುದಾನ ನೀಡಿ ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಿಂಚಣಿ, ಮನೆಕಟ್ಟುವ ಸಹಾಯಧನ ಮೊದಲಾದ ಸೌಲಭ್ಯಗಳನ್ನು ನೀಡಬೇಕೆಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಆಗ್ರ
ಹಿಸುತ್ತಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ತಿಳಿಸಿದ್ದಾರೆ.
