ವರದಿ : ಶ್ರೀದತ್ತ ಹೆಬ್ರಿ
ಮುದ್ರಾಡಿ : ಕುಟುಂಬಕ್ಕೆ ಆಧಾರವಾಗಿದ್ದ ಬೆಳ್ಳಾರೆಯ ಪ್ರವೀಣ್ ಕೊಲೆಯಿಂದಾಗಿ ಅವರ ಕುಟುಂಬ ತುಂಬಾ ಕಷ್ಟವಾಗಿದ್ದು ಅವರಿಗೆ 1 ಕೋಟಿ ರೂಪಾಯಿ ಪರಿಹಾರವನ್ನು ಸರ್ಕಾರ ನೀಡಬೇಕು ಜೊತೆಗೆ ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಸರ್ಕಾರವನ್ನು ಒತ್ತಾಯಿಸಿದರು.
ಅವರು ಮುದ್ರಾಡಿಯ ತನ್ನ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

ಹಿಂದೂ, ಮುಸ್ಲಿಂ ಸಹಿತ ಯಾವುದೇ ಸಮುದಾಯದ ಮಕ್ಕಳು ಧರ್ಮದ ಹೆಸರಿನಲ್ಲಿ ಕೊಲೆಯಾಗಬಾರದು. ಅಂಥ ಕಿಚ್ಚನ್ನು ಹಚ್ಚಿ ಕೋಮು ಗಲಭೆಗೆ ವಿಷಬೀಜ ಬಿತ್ತುವ ದ್ವೇಷ ಹರಡುವ ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಬೇಕು.
ಸಮಾಜದ ಘಾತುಕ ಶಕ್ತಿಗಳ ಸಂಘಟನೆಗಳನ್ನು ಜನರು ಬಹಿಷ್ಕರಿಸಬೇಕು. ಧರ್ಮದ ಹೆಸರಿನಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರವನ್ನು ಹಿಡಿಯಲು ಈ ರೀತಿಯ ಸಾವಿರಾರು ಕಗ್ಗೊಲೆಗಳು ನಡೆಯುತ್ತಿದೆ. ಕೋಮು ಗಲಭೆಯಲ್ಲಿ ಸತ್ತವರ ಶವಗಳ ಮೇಲೆ ರಕ್ತದ ಓಕುಳಿಯಲ್ಲಿ ರಾಜಕೀಯ ನಡೆಯುತ್ತಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದುರಂತ, ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಸುನಿಲ್, ಕುಮಾರ್, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಬಿಜೆಪಿ ನಾಯಕ ಸಿ.ಟಿ. ರವಿ ಪೈಯರ್ ಬ್ರಾಂಡ್ ಎಂದು ಬಿಂಬಿಸಿಕೊಂಡವರು ದುರಂತ ಸ್ಥಳದಿಂದ ಓಡಿದ್ದಾರೆ. ಇವರ ಬಣ್ಣ ಬಯಲಾಗಿದೆ. ಎಲ್ಲರನ್ನು ಸಿ.ಬಿ.ಐ ತನಿಖೆಗೆ ಒಳಪಡಿಸಬೇಕು. ಬಿಜೆಪಿ ನಾಯಕರ ನಾಟಕ ಬಿ.ಜೆ.ಪಿ ಕಾರ್ಯಕರ್ತರಿಗೆ ಗೊತ್ತಾಗಿದೆ. ಅವರ ಎಲ್ಲಾ ಸಮಾಜಘಾತುಕ ಕೃತ್ಯಗಳು ತನಿಖೆಯಾಗಬೇಕು ಮತ್ತು ಧಾರ್ಮಿಕ ಭಾವನೆಯನ್ನು ಕೆರಳಿ, ದ್ವೇಷದ ವಿಷಬೀಜವನ್ನು ಬಿತ್ತುವ ಧರ್ಮದ ಹೆಸರಿನಲ್ಲಿ ಕುಟುಂಬದ ನೆಮ್ಮದಿ ಹಾಳು ಮಾಡುವ ಧಾರ್ಮಿಕ ಮುಖಂಡರನ್ನು ಬಂಧಿಸಬೇಕು ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದರು.
ಪ್ರವೀಣ್ ನೆಟ್ಟಾರು, ಮಸೂದ್, ಶರತ್ ಮಡಿವಾಳ, ಪರಮೇಶ್ ಮೇಸ್ತ, ಪ್ರವೀಣ್ ಪೂಜಾರಿ, ಹರ್ಷ, ಪ್ರಶಾಂತ್ ಪೂಜಾರಿ, ಉದಯ ಪೂಜಾರಿ, ನಜೀರ್, ದೀಪಕ್ ರಾವ್ ಇಂತಹ ಸಾವಿರಾರು ಕುಟುಂಬದ ರಕ್ತ ಹರಿಯುವಂತೆ ಮಾಡಿದ ಯಾರಿಗೂ ರಕ್ಷಣೆ ಕೊಡದ ಬಿಜೆಪಿ ಸರ್ಕಾರ ಮಾಡಿದಾದರೂ ಏನು? ಜನ ಸಾಮಾನ್ಯರಿಗೆ ದಿನನಿತ್ಯ ವಸ್ತುಗಳ ಮೇಲೆ ಬೆಲೆ ಏರಿ, ಭ್ರಷ್ಟಚಾರವನ್ನು ರಾಜರೋಷವಾಗಿ ಮಾಡುತ್ತಿದ್ದಾರೆ. ಕಾನೂನು ಬಿಜೆಪಿಯವರಿಗೆ ಇಲ್ಲ. ಇನ್ನಾದರೂ ಇಂತಹ ಪಕ್ಷ ಸಂಘಟನೆಗಳನ್ನು ನಂಬಿ ಭವಿಷ್ಯವನ್ನು ಹಾಗೂ ನಿಮ್ಮ ಮೇಲೆ ಅವಲಂಬಿತರಾದ ತಂದೆ ತಾಯಿ ಮತ್ತು ಕುಟುಂಬಸ್ಥರನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್, ಗೃಹ ಸಚಿವ ಅರಗ ಜ್ಞಾನೇಂದ್ರ ರಾಜಿನಾಮೆ ನೀಡಬೇಕು ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಒತ್ತಾಯಿಸಿದ್ದಾರೆ.
