ಬೆಂಗಳೂರು: ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ದೆಹಲಿ ಸರ್ಕಾರ ಈಗಾಗಲೇ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿತ್ತು. ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಬಗ್ಗೆ ಸಚಿವ ಸುಧಾಕರ್ ಮಾಹಿತಿ ನೀಡಿದರು.
ಅವರು ಕೋವಿಡ್ ನಿಯಂತ್ರಣ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಇನ್ಮುಂದೆ ಮಾಸ್ಕ್ ಎಲ್ಲರೂ ಧರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು. ಮಾಸ್ಕ್ ಎಲ್ಲಾರೂ ಕಡ್ಡಾಯವಾಗಿ ಧರಿಸಬೇಕು. ಜನರು ಏನೂ ಆಗಲ್ಲ ಅಂತಾ ಉದಾಸೀನ ತೋರ್ತಿದ್ದಾರೆ. 17,18, 21 ವರ್ಷದ ಯುವಕರು ಸಾವಿಗೀಡಾಗಿದ್ದಾರೆ.
ಮುಂದಿನ ದಿನಗಳಲ್ಲಿ ಕೊವಿಡ್ ಸೋಂಕು ಏರಿಕೆ ಆದ್ರೆ ಕ್ರಮ ಕೈಗೊಳ್ಳಲಾಗುವುದು. 15 ದಿನಗಳಲ್ಲಿ ಮತ್ತೊಮ್ಮೆ ಸಭೆ ಮಾಡ್ತೇವೆ. ಸಭೆ-ಸಮಾರಂಭ ನಿರ್ಬಂಧಿಸಬೇಕು ಎಂದು ತಜ್ಞರು ಹೇಳಿಲ್ಲ. ಆದರೆ ಜನರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಹಬ್ಬಕ್ಕೆ ಯಾವುದೇ ಪ್ರತ್ಯೇಕ ರೂಲ್ಸ್ ಜಾರಿ ಇಲ್ಲ. ವ್ಯಾಕ್ಸಿನ್ ಹಾಕಿಸಿದ್ರೆ ಸಾವು ಬರಲ್ಲ, ಸೋಂಕು ತಡೆಯಬಹುದು. ಸಿಎಂ ಬೊಮ್ಮಾಯಿ ಮೂರು ಡೋಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಅವರಿಗೆ ಏನೂ ಸಮಸ್ಯೆ ಆಗಿಲ್ಲ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.

ಮಂಕಿಪಾಕ್ಸ್ ಪ್ರಕರಣಗಳ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿಲ್ಲ. ಈ ಸೋಂಕಿನ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆಗಾಲದಲ್ಲಿ ಹೆಚ್ಚಳವಾಗುತ್ತಿರುವಂತ ಮಲೇರಿಯಾ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದರು.