ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೇರಳದಲ್ಲಿ ಬಂಧಿಸಲ್ಪಟ್ಟ ಶಂಕಿತ ನಕ್ಸಲ್ವಾದಿಗಳಾದ ಶೃಂಗೇರಿ ತಾಲೂಕು ಭುವನಹಡ್ಲು ಗ್ರಾಮದ ಬಿ. ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಯಾನೆ ರೆಜಿತಾ ಅವರನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರ ಮೇಲಿನ ಪ್ರಕರಣಗಳ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಶಂಕರನಾರಾಯಣ ಠಾಣಾ ವ್ಯಾಪ್ತಿಯಲ್ಲಿನ 6 ಹಾಗೂ ಕೊಲ್ಲೂರು ಠಾಣೆ ವ್ಯಾಪ್ತಿಯಲ್ಲಿನ 1 ಒಟ್ಟು 7 ಪ್ರಕರಣದ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಆದರೆ ಇವುಗಳಲ್ಲಿನ ಅಪರಾಧಗಳ ಸೆಕ್ಷನ್ಗಳು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಯಾಗಬೇಕಿರುವುದರಿಂದ 2 ಪ್ರಕರಣಗಳನ್ನು ವಿಚಾರಣೆಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ನೀಡಲಾಯಿತು.


ಕೇರಳದಲ್ಲಿ ಇರುವ 4 ಪ್ರಕರಣಗಳ ಪೈಕಿ ಒಂದರಲ್ಲಿ ಜಾಮೀನು ಮಂಜೂರಾಗಿದ್ದು, ಉಳಿದವುಗಳ ವಿಚಾರಣೆಗೆ ಕರ್ನಾಟಕದಿಂದ ಹೋಗಿ ಬರಬಹುದು. ಕರ್ನಾಟಕದಲ್ಲಿ ಹೆಚ್ಚಿನ ಪ್ರಕರಣಗಳು ಇರುವ ಕಾರಣ ಕರ್ನಾಟಕದ ಜೈಲಿನಲ್ಲಿ ಇರಿಸಬೇಕೆಂದು ಬಿ.ಜಿ.ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ಲಿಖಿತ ರೂಪದಲ್ಲಿ ಮನವಿ ಮಾಡಿದ್ದ. ಆದರೆ, ನ್ಯಾಯಾಲಯ ಸದ್ಯಕ್ಕೆ ಆರೋಪಿಯ ಮನವಿ ಪುರಸ್ಕರಿಸಲಿಲ್ಲ.


































