ಕೊಪ್ಪಳ: ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ 6 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕುಕನೂರು ತಾಲೂಕಿನ ಕೋಮುಲಾಪುರದಲ್ಲಿ ನಡೆದಿದೆ. ಜಯರಾಜ್(6) ಬೆಂಕಿಗಾಹುತಿಯಾದ ಬಾಲಕ.
ಹನುಮಪ್ಪ ಅಬ್ಬಿಗೇರಿ ಎಂಬುವರಿಗೆ ಸೇರಿದ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮೃತ ಬಾಲಕನ ಅಣ್ಷ ವಿನೋದ ರಾಜ್(11) ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಂಕರರಾಜ್(8) ಅಪಾಯದಿಂದ ಪಾರಾಗಿದ್ದಾನೆ.
ಕೊಮಲಾಪೂರ ಗ್ರಾಮದಲ್ಲಿ ಹನುಮಂತಪ್ಪ ಅಬ್ಬಿಗೇರಿ ಎನ್ನುವರು ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಇವರ ಕಿರಾಣಿ ಅಂಗಡಿಗೆ ಹೊಂದಿಕೊಂಡೇ ಮನೆ ಸಹ ಇದ್ದು, ಇವರಿಗಿರುವ ಮೂರು ಮಕ್ಕಳು ಪ್ರತಿನಿತ್ಯ ಸಂಜೆ ಕಿರಾಣಿ ಅಂಗಡಿಯಲ್ಲಿ ಓದುತ್ತಾ ವ್ಯಾಪಾರ ಮಾಡುತ್ತಾ ಇರುತ್ತಿದ್ದರು. ಅದರಂತೆ ಮಂಗಳವಾರವೂ ಸಹ ಮೂವರು ಮಕ್ಕಳು ಅಂಗಡಿಯಲ್ಲಿ ಕುಳಿತಿದ್ದಾರೆ. ಈ ವೇಳೆ ಕಿರಾಣಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಮೂವರು ಮಕ್ಕಳ ಪೈಕಿ ಕಿರಿಯ ಮಗನಾದ 6 ವರ್ಷದ ಜಯರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಆಕಸ್ಮಿಕ ಅಗ್ನಿ ಅವಘಡದಿಂದ ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
