ಬೈಂದೂರು : ಜಿಂಕೆ ಬೇಟೆಯಾಡಿ ಮಾಂಸ ಮಾಡಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬೈಂದೂರು ಪೊಲೀಸರು ಬಂಧಿಸಿರುವ ಘಟನೆ ಶಿರೂರು ಬಳಿ ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿಯ ಅನತಿ ದೂರದಲ್ಲಿ ನಡೆದಿದೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ಬರುವ ಕಾರಣದಿಂದಾಗಿ ಹೆಚ್ಚಿನ ತನಿಖೆಗಾಗಿ ಅರಣ್ಯ ಇಲಾಖಾಧಿಕಾರಿಗಳಿಗೆ ಒಪ್ಪಿಸಲಾಗಿದೆ.
ಮೂಲತಃ ಭಟ್ಕಳದವರಾದ ಮೊಹಮ್ಮದ್ ನಾಸೀರ್ (35), ಅಬ್ದುಲ್ ಅಲೀಂ (23) ಬಂಧಿತ ಆರೋಪಿಗಳು.
ಬಂಧಿತರಿಂದ 20 ಕೆ.ಜಿ. ಜಿಂಕೆ ಮಾಂಸ, ಹಾಗೂ ಸಾಗಾಟಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಕುಂದಾಪುರ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ. , ಬೈಂದೂರು ಸಿಪಿಐ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಬೈಂದೂರು ಪಿಎಸ್ಐ ನಿರಂಜನ ಗೌಡ ಹಾಗೂ ಸಿಬ್ಬಂದಿಗಳು ಒತ್ತಿನೆಣೆ ಹೆದ್ದಾರಿ ಬಳಿ ಗಸ್ತಿನಲ್ಲಿದ್ದಾಗ ಅನುಮಾನದ ಮೇರೆಗೆ ಕುಂದಾಪುರ ಕಡೆಯಿಂದ ಭಟ್ಕಳ ಭಾಗದತ್ತ ತೆರಳುತ್ತಿದ್ದ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಸವಾರರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬೆಂಬತ್ತಿದ ಪೊಲೀಸರು ಬಹಳಷ್ಟು ದೂರ ಸಾಗಿ ಆರೋಪಿಗಳ ಸಹಿತ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಅದರಲ್ಲಿ ಬೇಟೆಯಾಡಿದ ಜಿಂಕೆ ಮಾಂಸ ಇರುವುದು ಖಾತ್ರಿಯಾಗಿದ್ದು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಲಾಗಿದೆ. ಪ್ರಕರಣ ವನ್ಯಜೀವಿ ಕಾಯ್ದೆಯಡಿ ದಾಖಲಾಗಬೇಕಾದ ಹಿನ್ನೆಲೆ ಹೆಚ್ಚಿನ ವಿಚಾರಣೆಗೆ ಆರೋಪಿಗಳನ್ನು ಬೈಂದೂರು ವಲಯ ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿತ್ತು. ಬೈಂದೂರು ವಲಯಾರಣ್ಯಾಧಿಕಾರಿ ಸಿದ್ದೇಶ್ವರ್ ಹಾಗೂ ಸಿಬ್ಬಂದಿಗಳ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎನ್ನಲಾಗಿದೆ.
