ಬೆಂಗಳೂರು : ಲೋಕಸಭೆ ಚುಣಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವಿಚಾರವಾಗಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಜೆಡಿಎಸ್ ಕರ್ನಾಟಕ ಚಿಂತನ ಮಂಥನ ಸಭೆಯಲ್ಲಿ ಇಬ್ರಾಹಿಂ ಈ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ನಾನು ರಾಜ್ಯಾಧ್ಯಕ್ಷ. ನನ್ನನ್ನು ತೆಗೆದು ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್ ಪಕ್ಷ ಒಂದು ಕುಟುಂಬದ ಸ್ವತ್ತಲ್ಲ ಎಂದಿದ್ದಾರೆ. ನಮ್ಮದೇ ಒರಿಜಿನಲ್ ಜೆಡಿಎಸ್ ಪಕ್ಷವಾಗಿದೆ. ನಾನು ಒರಿಜಿನಲ್ ಜೆಡಿಎಸ್ ನ ರಾಜ್ಯ ಅಧ್ಯಕ್ಷನಾಗಿದ್ದೇನೆ. ನನ್ನನ್ನು ಯಾರು ಪಕ್ಷದಿಂದ ತೆಗೆಯಲು ಸಾಧ್ಯವಿಲ್ಲ. ನನ್ನನ್ನು ತೆಗೆಯಬೇಕಾದ್ರೆ 2/3 ನಲ್ಲಿ ಸಭೆ ಮಾಡಿ ತೆಗೆಯಬೇಕು. ಬಿಜೆಪಿ ಜೊತೆ ಮೈತ್ರಿಗೆ ಒರಿಜಿನಲ್ ಜೆಡಿಎಸ್ ಬೆಂಬಲ ಇಲ್ಲ.
ಜಾತ್ಯತೀತತೆ ಜೆಡಿಎಸ್ ಪಕ್ಷದ್ದ ಸಿದ್ಧಾಂತವಾಗಿದೆ. ಆದರೆ, ಬಿಜೆಪಿಯ ಸಿದ್ಧಾಂತವೇ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವನ್ನು ಸೋಲಿಸಲು ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಇಬ್ರಾಹಿಂ ಘೋಷಿಸಿದ್ದಾರೆ.

ಕುಮಾರಸ್ವಾಮಿ ಶಾಸಕರಾಗಿರುವುದಕ್ಕೆ ಅಮಿಶ್ ಶಾ ಕರೆದಿದ್ದಾರೆ. ಆದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಗೆದ್ದಿದ್ದು ಯಾರಿಂದ? ಅಲ್ಲಿ ಮುಸ್ಲಿಮರು ಮತ ಹಾಕದಿದ್ದರೆ ಸೋತು ಮನೆ ಸೇರುತ್ತಿದ್ದರು. ಹೀಗಾಗಿ ಈಗಲೂ ಬಿಜೆಪಿ ಜೊತೆ ಹೋಗದೆ ಕೋರ್ ಕಮಿಟಿ ಮಾಡಿ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ನಾವು ಮೈತ್ರಿ ಮಾಡಿಕೊಂಡರೆ ನಾಲ್ಕು ಸೀಟು ಸಿಗುತ್ತದೆ. ನಾವು ಶಕ್ತಿ ಪ್ರದರ್ಶನ ಮಾಡಬಹುದಿತ್ತು. ನಾನು ಕೋರ್ ಕಮಿಟಿ ರಚನೆ ಮಾಡಿ ರಾಜ್ಯ ಪ್ರವಾಸ ಮಾಡುತ್ತೇನೆ ಎಂದರು.
ಇಂದು ಬೆಂಗಳೂರಿನಲ್ಲಿ ನಡೆದ ಚಿತನ-ಮಂಥನ ಸಭೆಯ ಪೋಸ್ಟರ್ನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಫೋಟೋ ಕಾಣೆಯಾಗಿತ್ತು. ಇನ್ನು ಸಭೆಯಲ್ಲಿ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಮುಖಂಡರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

