ಹೊಸದಿಲ್ಲಿ : ಗಾಯಕ್ಕೆ ತುತ್ತಾಗಿರುವ ಭಾರತ ತಂಡದ ಹಾರ್ದಿಕ್ ಪಾಂಡ್ಯ ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಬಿಸಿಸಿಐ ಶುಕ್ರವಾರ ಖಚಿತ ಪಡಿಸಿದೆ.
ಗುರುವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದರು. ಪಂದ್ಯದ 9ನೇ ಓವರ್ ಬೌಲ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ, ಲಿಟನ್ ದಾಸ್ ಹೊಡೆದಿದ್ದ ಚೆಂಡನ್ನು ತಡೆಯಲು ತಮ್ಮ ಬಲಗಾಲಿನಿಂದ ಪ್ರಯತ್ನಿಸಿ ನೆಲಕ್ಕೆ ಉರುಳಿದ್ದರು. ಈ ವೇಳೆ ಅವರ ಪಾದದಲ್ಲಿ ಗಂಭೀರ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹಾರ್ದಿಕ್ ತಮ್ಮ ಓವರ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಅವರ ಓವರ್ ಮುಕ್ತಾಯಗೊಳಿಸಿದ್ದರು.
ಸಹಾಯಕ ಸಿಬ್ಬಂದಿಯ ನೆರವಿನಿಂದ ಹಾರ್ದಿಕ್ ಪಾಂಡ್ಯ ಮೈದಾನ ತೊರೆದಿದ್ದರು. ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ಸ್ಕ್ಯಾನ್ಗೆ ಒಳಗಾಗಿದ್ದರು. ಪಾದಕ್ಕೆ ಯಾವುದೇ ಗಂಭೀರ ಗಾಯವಾಗಿರುವುದು ಕಂಡು ಬಂದಿಲ್ಲ. ಆದರೆ, ಅವರು ಸಂಪೂರ್ಣ ಗುಣಮುಖರಾಗಲು ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ. ಹಾಗಾಗಿ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬಿಸಿಸಿಐ ಪ್ರಕಟಣೆ :
ಹಾರ್ದಿಕ್ ಪಾಂಡ್ಯ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, “ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮದೇ ಬೌಲಿಂಗ್ ವೇಳೆ ಚೆಂಡನ್ನು ತಡೆಯುವ ಪ್ರಯತ್ನದಲ್ಲಿದ್ದಾಗ ಹಾರ್ದಿಕ್ ಪಾಂಡ್ಯ ಅವರ ಎಡಗೈ ಪಾದಕ್ಕೆ ಗಾಯವಾಗಿದೆ” ಎಂದು ತಿಳಿಸಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಸ್ಕ್ಯಾನ್ಗೆ ಒಳಪಡಿಸಲಾಗಿತ್ತು ಹಾಗೂ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯಕೀಯ ತಂಡ ಸೂಚಿಸಿದೆ. ಬಿಸಿಸಿಐ ವೈದ್ಯರು ಹಾರ್ದಿಕ್ ಪಾಂಡ್ಯ ಅವರನ್ನು ನೋಡಿಕೊಳ್ಳಲಿದ್ದಾರೆ. 20 ರಂದು ಭಾರತ ತಂಡ ಧರ್ಮಶಾಲಾಗೆ ಪ್ರಯಾಣ ಬೆಳೆಸಲಿದೆ. ಆದರೆ, ಹಾರ್ದಿಕ್ ಪಾಂಡ್ಯ ಅವರು ಪ್ರಯಾಣಿಸುತ್ತಿಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯದ ನಿಮಿತ್ತ ಲಖೌನದಲ್ಲಿ ಭಾರತ ತಂಡಕ್ಕೆ ಹಾರ್ದಿಕ್ ಸೇರ್ಪಡೆಯಾಗಲಿದ್ದರೆ” ಎಂದು ಬಿಸಿಸಿಐ ಮಾಹಿತಿ ನೀಡಿದೆ.
🚨 NEWS 🚨
Medical Update: Hardik Pandya 🔽 #CWC23 | #TeamIndiahttps://t.co/yiCbi3ng8u— BCCI (@BCCI) October 20, 2023

