ನವದೆಹಲಿ: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್ನಿಂದ ದೂರ ಉಳಿದಿದ್ದ ಭಾರತೀಯ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಪಾಲ್ಗೊಳ್ಳಲು ಸಮ್ಮತಿ ದೊರೆತಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ಭೀಕರ ಕಾರು ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಭಾರತದ ಸ್ಟಾರ್ ಆಟಗಾರ ರಿಷಭ್ ಪಂತ್ ಕ್ರಿಕೆಟ್ ಕಂಬ್ಯಾಕ್ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ನವೆಂಬರ್ 23ರಿಂದ ನಡೆಯಲಿರುವ ವಿಜಯ್ ಹಜಾರೆ ಏಕದಿನ ಟ್ರೋಫಿ ಅಥವಾ ಜನವರಿ 5ರಿಂದ ಆರಂಭಗೊಳ್ಳುವ ರಣಜಿ ಟ್ರೋಫಿಯಲ್ಲಿ ತವರು ದೆಹಲಿ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಫಿಟ್ನೆಸ್ ಸಾಬೀತು :

ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿರುವ ಪಂತ್ ಈಗಾಗಲೆ ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸ ನಡೆಸಿದ ವಿಡಿಯೊಗಳು ವೈರಲ್ ಆಗಿತ್ತು. ಅಲ್ಲದೆ ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಕ್ರಿಕೆಟ್ ಅಭ್ಯಾಸ ಪಂದ್ಯವೊಂದರಲ್ಲಿ ಪಂತ್ ಬ್ಯಾಟಿಂಗ್ ನಡೆಸಿದ್ದರು. ತಮ್ಮ ಎಂದಿನ ಶೈಲಿಯಲ್ಲೇ ಸಿಕ್ಸರ್ ಮತ್ತು ಬೌಂಡರಿ ಕೂಡ ಬಾರಿಸಿ ಮಿಂಚಿದ್ದರು. ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್ ಮೇಲೆ ಬಿಸಿಸಿಐ ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳ ಬೇಕಾದರೆ ದೇಶೀಯ ಕ್ರಿಕೆಟ್ನಲ್ಲಿ ಆಡಿ ತಮ್ಮ ಫಿಟ್ನೆಸ್ ಸಾಬೀತುಪಡಿಸಬೇಕಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಆಫ್ಘನ್ ಸರಣಿಯಲ್ಲಿ ಕಣಕ್ಕೆ:
ಏಕದಿನ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಆಡಲಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಆದರೆ ಪಂತ್ ಈ ಸರಣಿಗೆ ಫಿಟ್ ಆಗುವ ಸಾಧ್ಯತೆ ಕಡಿಮೆ ಇದೆ. 2024ರ ಜನವರಿ 11ರಿಂದ ಅಫ್ಫಾನಿಸ್ತಾನ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿ ವೇಳೆಗೆ ಅವರು ಫಿಟ್ ಆಗಿ ತಂಡದ ಪರ ಆಡುವ ನಿರೀಕ್ಷೆ ಇದೆ.
ಪಂತ್ ಅಫಘಾನಿಸ್ತಾನ ಪರ ಆಡಿದರೆ, ಜನವರಿ 25ರಿಂದ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಂತ್ ಆಡುವ ಸಾಧ್ಯತೆ ಇದೆ.

ವಿಜಯ್ ಹಜಾರೆ ಟ್ರೋಫಿ ತಪ್ಪಿದಲ್ಲಿ ರಣಜಿ ಟ್ರೋಫಿ:
ಹಾಲಿ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಪಂತ್ ಆಡುವ ನಿರೀಕ್ಷೆಯಲ್ಲಿದ್ದರು. ಆದರೆ ಸಂಪೂರ್ಣ ಫಿಟ್ ಆಗದ ಕಾರಣ ಅವರನ್ನು ಈ ಟೂರ್ನಿಗೆ ಪರಿಗಣನೆ ಮಾಡಿಲ್ಲ. ಆದರೆ, ನವೆಂಬರ್ 23ರಿಂದ ನಡೆಯಲಿರುವ ವಿಜಯ್ ಹಜಾರೆ ಏಕದಿನ ಟ್ರೋಫಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದುವೇಳೆ ಇದು ಕೂಡ ಸಾಧ್ಯವಾಗದಿದ್ದರೆ, ಜನವರಿ 5ರಿಂದ ನಡೆಯಲಿರುವ ರಣಜಿ ಟ್ರೋಫಿಯಲ್ಲಿ ಆಡುವುದು ಖಚಿತ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ

