ಬೆಂಗಳೂರು : 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು 68 ಜನರಿಗೆ ವಿತರಣೆ ಮಾಡಲಾಗುವುದು. ಇದರಲ್ಲಿ 10 ಸಂಸ್ಥೆಗಳು ಹಾಗೂ 68 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1,157 ನನ್ನ ಬಳಿ ಬಂದು ರಾಜ್ಯೋತ್ಸವ ಅರ್ಜಿ ತಂದುಕೊಟ್ಟಿದ್ದರು. 2,166 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ ಎಂದು 26,555 ಜನರು ಶಿಫಾರಸು ಮಾಡಿದ್ದರು. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜೊತೆ ಚರ್ಚೆ ಮಾಡಿದ ಬಳಿಕ 68 ಪ್ರಶಸ್ತಿ ಆಯ್ಕೆ ಮಾಡಿದ್ದೇವೆ. ಸುವರ್ಣ ಮಹೋತ್ಸವ ಪ್ರಯುಕ್ತ 10 ಸಂಘ ಸಂಸ್ಥೆಗಳಿಗೆ ನೀಡಿದ್ದೇವೆ. ಈ ಬಾರಿ 100 ವರ್ಷ ದಾಟಿದ ಇಬ್ಬರಿಗೆ ಪ್ರಶಸ್ತಿ ನೀಡಲಾಗಿದೆ. ಬೀದರ್ ಜಿಲ್ಲೆಯ ಮಂಗಳಮುಖಿಗೆ ಪ್ರಶಸ್ತಿ ನೀಡಿದ್ದೇವೆ ಎಂದರು.
ಯಾರಿಗೆಲ್ಲ ಪ್ರಶಸ್ತಿ?:

ಸಂಗೀತ ಕ್ಷೇತ್ರದಲ್ಲಿ ಬೆಂಗಳೂರಿನ ಡಾ ನಯನ ಎಸ್ ಮೋರೆ, ಧಾರವಾಡದ ನೀಲಾ ಎಂ ಕೊಡ್ಗಿ, ಬೆಂಗಳೂರಿನ ಶಬ್ಬೀರ್ ಅಹಮದ್, ಚಲನಚಿತ್ರ ಕ್ಷೇತ್ರದಲ್ಲಿ ಬೆಂಗಳೂರಿನ ಡಿಂಗ್ರಿ ನಾಗರಾಜ ಮತ್ತು ಬ್ಯಾಂಕ್ ಜನಾರ್ದನ, ರಂಗಭೂಮಿ ಕ್ಷೇತ್ರದಲ್ಲಿ ಶಿವಮೊಗ್ಗದ ಎ ಜಿ ಚಿದಂಬರ ರಾವ್ ಜಂಬೆ, ಮೈಸೂರಿನ ಪಿ ಗಂಗಾಧರ ಸ್ವಾಮಿ, ಧಾರವಾಡದ ಎಚ್ ಬಿ ಸರೋಜಮ್ಮ, ಬಾಗಲಕೋಟೆಯ ತಯ್ಯಬಖಾನ್ ಎಂ ಇನಾಮದಾರ, ಡಾ ವಿಶ್ವನಾಥ್ ವಂಶಾಕೃತ ಮಠ, ಚಿತ್ರದುರ್ಗದ ಪಿ ತಿಪ್ಪೇಸ್ವಾಮಿ ಅವರಿಗೆ ಲಭಿಸಿದೆ.
ಇಸ್ರೋ ಮುಖ್ಯಸ್ಥಎಸ್ ಸೋಮನಾಥನ್, ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಸಮಾಜ ಸೇವಕ ಚಾರ್ಮಾಡಿ ಹಸನಬ್ಬ, ಸಾಹಿತಿ ಲಕ್ಷ್ಮೀಪತಿ ಕೋಲಾರ,
ಶಿಲ್ಪಕಲೆ, ಚಿತ್ರಕಲೆ, ಕರಕುಶಲ ಕ್ಷೇತ್ರಗಳಲ್ಲಿ ದಾವಣಗೆರೆಯ ಟಿ ಶಿವಶಂಕರ್, ರಾಯಚೂರಿನ ಕಾಳಪ್ಪ ವಿಶ್ವಕರ್ಮ, ಬೆಂಗಳೂರಿನ ಮಾರ್ಥಾ ಜಾಕಿಮೋವಿಚ್, ಮೈಸೂರಿನ ಪಿ ಗೌರಯ್ಯ, ಯಕ್ಷಗಾನ ಮತ್ತು ಬಯಲಾಯ ಕ್ಷೇತ್ರಗಳಲ್ಲಿ ಉಡುಪಿಯ ಅರ್ಗೋಡು ಮೋಹನ್ ದಾಸ್ ಶೆಣೈ, ದಕ್ಷಿಣ ಕನ್ನಡದ ಕೆ ಲೀಲಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ, ದಳವಾಯಿ ಸಿದ್ದಪ್ಪ(ಹಂದಿಜೋಗಿ) ಅವರಿಗೆ ನೀಡಲಾಗುವುದು.
25 ಗ್ರಾಂ ಚಿನ್ನ, 5 ಲಕ್ಷ ರೂ. ನಗದು : ರಾಜ್ಯೋತ್ಸವ ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದು ಒಳಗೊಂಡಿರಲಿದೆ. ಎಲ್ಲಾ ಅರ್ಹರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನಾಳೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.


































