ಕುಂದಾಪುರ: ಹೇರಿಕುದ್ರು ಎಂಬಲ್ಲಿ ಮಹಾಗಣಪತಿ ಮಾನಸ ಮಂದಿರದಲ್ಲಿ ಶನಿವಾರ ರಾತ್ರಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಯಕ್ಷಗಾನ ಪ್ರಸಂಗಕ್ಕೆ ತಡೆಯೊಡ್ಡಿದ ವಿಚಾರವಾಗಿ ಭಾರೀ ಆಕ್ರೋಶ ಕೇಳಿಬಂದಿದೆ.
ಸಮಯ ಮೀರಿ ಮೈಕ್ ಬಳಕೆ ಮಾಡಲಾಗುತ್ತಿದೆ ಎಂಬ ದೂರಿನ ಮೇಲೆ ಆಗಮಿಸಿದ ಪೊಲೀಸರು ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ. ಈ ಘಟನೆ ಯಕ್ಷಗಾನ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹೇರಿಕುದ್ರು ಯಕ್ಷ ಹಬ್ಬ ನ.3ರಿಂದ ಆರಂಭವಾಗಿದ್ದು ನ.11ರವರೆಗೆ ಆಯೋಜನೆಯಾಗಿದೆ. ನ.4ರಂದು ಗೆಜ್ಜೆನಾದ ಯಕ್ಷಗಾನ ಕಲಾ ಮಂಡಳಿ ಕುಂದಾಪುರ ಇವರಿಂದ ವಿಘ್ನೇಶಪ್ರಸಾದ ಗಂಗೊಳ್ಳಿ ನಿರ್ದೇಶನದಲ್ಲಿ ಶ್ರೀ ಕೃಷ್ಣ ಲೀಲಾಮೃತ ಪ್ರಸಂಗದ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಬಂದು ಪ್ರದರ್ಶನ ಸ್ಥಗಿತಗೊಳಿಸಲು ಸೂಚಿಸಿದ್ದಾಗಿ ಮೈಕ್ ಮೂಲಕ ಘೋಷಣೆ ಮಾಡಿ ಪ್ರದರ್ಶನ ರದ್ದು ಮಾಡಲಾಯಿತು. ಆನ್ಲೈನ್ ಲೈನ್ ಇದ್ದ ಕಾರಣ ಈ ತುಣುಕು ಎಲ್ಲೆಡೆ ವೈರಲ್ ಆಗಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.


ಮಕ್ಕಳು ಯಕ್ಷಗಾನ ಪ್ರದರ್ಶನ ಮಾಡುತ್ತಿದ್ದಂತೆ ಆಯೋಜಕ ಮಹಾಬಲ ಪೂಜಾರಿ, ಮಕ್ಕಳ ಯಕ್ಷಗಾನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಿದ್ದೇವೆ. ಇದಕ್ಕೆ ಉದಯ ಪೂಜಾರಿ ಎಂಬುವವರೇ ಕಾರಣ. ನಾಳೆ ಪ್ರದರ್ಶನಕ್ಕೆ ಒಂದು ಗಂಟೆ ಹೆಚ್ಚಿಗೆ ಸಮಯವನ್ನು ಕೇಳುವೆ. ಒಂದು ವೇಳೆ ಸಮಯ ಕೊಡದಿದ್ದರೆ ಪ್ರದರ್ಶನವನ್ನು ನಿಲ್ಲಿಸುವುದು ಅನಿವಾರ್ಯ” ಎಂದು ಅಸಮಾಧಾನವನ್ನು ಮೈಕ್ ಮೂಲಕ ಹೊರಹಾಕಿದ್ದು, ಈ ದೃಶ್ಯ ವೈರಲ್ ಆಹಿದೆ.
