ಮಲ್ಪೆ : ನೇಜಾರುವಿನ ತೃಪ್ತಿ ಲೇಔಟ್ನಲ್ಲಿ ಇಂದು ಬೆಳಗ್ಗೆ ಮೂವರು ಮಹಿಳೆಯರ ಸಹಿತ ಒಂದೇ ಕುಟುಂಬದ ನಾಲ್ವರನ್ನು ಕೊಲೆಗೈದ ಪ್ರಕರಣದ ಆರೋಪಿ ಸಂತೆಕಟ್ಟೆಯಿಂದ ತೃಪ್ತಿ ಲೇಔಟ್ ಗೆ ಆಟೋ ರಿಕ್ಷಾದಲ್ಲಿ ಆಗಮಿಸಿದ್ದ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಆರೋಪಿ ಸಂತೆಕಟ್ಟೆಯಿಂದ ಶ್ಯಾಮ್ ಎಂಬವರ ಆಟೋ ರಿಕ್ಷಾದಲ್ಲಿ ಕೊಲೆಯಾದ ಹಸೀನಾ ಅವರ ಮನೆಗೆ ಆಗಮಿಸಿದ್ದಾನೆ. ಇಂದು ಬೆಳಗ್ಗೆ 8:30ರಿಂದ 9 ಗಂಟೆಯ ಮಧ್ಯೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಕ್ವೀನ್ಸ್ ರಸ್ತೆಯಲ್ಲಿ ನನ್ನ ರಿಕ್ಷಾವನ್ನು ಏರಿದ್ದಾನೆ. ನೇಜಾರುವಿನ ತೃಪ್ತಿ ಲೇಔಟ್ ಗೆ ಕರೆದೊಯ್ಯುವಂತೆ ಸೂಚಿಸಿದ್ದಾನೆ. ಅದರಂತೆ ಆತನನ್ನು ತೃಪ್ತಿ ಲೇಔಟ್ ನಲ್ಲಿ ಇದೀಗ ಕೊಲೆ ನಡೆದಿರುವ ಮನೆಯ ಗೇಟ್ ಬಳಿ ಬಿಟ್ಟಿದ್ದೆ ಎಂದು ಶ್ಯಾಮ್ ತಿಳಿಸಿದ್ದಾರೆ.
15 ನಿಮಿಷದಲ್ಲಿ ಕೃತ್ಯ :

ಕೊಲೆ ನಡೆದಿರುವ ಮನೆಗೆ ಆಟೋ ಚಾಲಕ ಬಿಟ್ಟ ಬಳಿಕ 15 ನಿಮಿಷಗಳ ಅಂತರದಲ್ಲಿ ಆತ ಮತ್ತೆ ಸಂತೆಕಟ್ಟೆ ಆಟೋ ನಿಲ್ದಾಣಕ್ಕೆ ಬಂದು ಕ್ಯೂನಲ್ಲಿದ್ದ ಬೇರೊಂದು ರಿಕ್ಷಾ ಏರಿದ್ದಾನೆ. ಈ ವೇಳೆ ಆತನನ್ನು ಗುರುತಿಸಿದ ಶ್ಯಾಮ್, ಇಷ್ಟು ಬೇಗ ಬರಲಿಕ್ಕಿದ್ದರೆ ನಾನು ಕಾಯುತ್ತಿದ್ದೆ ಎಂದು ಹೇಳಿದ್ದಾರೆ. ಅದಕ್ಕೆ ಆತ ಪರವಾಗಿಲ್ಲ ಎಂದಿದ್ದಾನೆ. ಅಲ್ಲದೆ ವೇಗವಾಗಿ ಹೋಗುವಂತೆ ಆ ರಿಕ್ಷಾ ಚಾಲಕನಿಗೆ ಸೂಚಿಸಿದ್ದ ಎಂದು ತಿಳಿದುಬಂದಿದೆ.
“ಸುಮಾರು 45 ವರ್ಷ ಪ್ರಾಯದ ಆ ವ್ಯಕ್ತಿ ಕನ್ನಡ ಮಾತನಾಡುತ್ತಿದ್ದ. ಮುಖಕ್ಕೆ ಮಾಸ್ಕ್ ಧರಿಸಿದ್ದ ಆತನ ಕಣ್ಣಿನ ಭಾಗ ಮಾತ್ರ ಕಾಣಿಸುತ್ತಿತ್ತು. ಬೋಳು ತಲೆಯ ಆ ವ್ಯಕ್ತಿ ಬಿಳಿ ಮೈಬಣ್ಣ ಹೊಂದಿದ್ದ” ಎಂದು ಶ್ಯಾಮ್ ತಿಳಿಸಿದ್ದಾರೆ.
ಏನಿದು ಪ್ರಕರಣ ?

ಇಂದು ಬೆಳಗ್ಗೆ ನೇಜಾರುವಿನ ತೃಪ್ತಿ ಲೇಔಟ್ ನಿವಾಸಿ ಹಸೀನಾ(42), ಅವರ ಪುತ್ರಿಯರಾದ ಅಫ್ನಾನ್(22) ಮತ್ತು ಅಯ್ನಾಝ್(20) ಮತ್ತು ಪುತ್ರ ಅಸೀಮ್(12)ನನ್ನು ದುಷ್ಕರ್ಮಿಯೋರ್ವ ಹರಿತವಾದ ಆಯುಧದಿಂದ ಇರಿದು ಕೊಲೆಗೈಯ್ಯಲಾಗಿತ್ತು. ಇನ್ನು ಅತ್ತೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
