ಮುಂಬೈ: ಖ್ಯಾತ ಶೈಕ್ಷಣಿಕ ಸಂಸ್ಥೆ ಬೈಜೂಸ್ ಆರ್ಥಿಕ ಸಂಕಷ್ಟದಲ್ಲಿದೆ. ಇದೀಗ ತನ್ನ ಸಿಬ್ಬಂದಿಗಳಿಗೆ ವೇತನ ನೀಡಲು ಮಾಲೀಕರು ಮನೆಗಳನ್ನೇ ಗಿರವಿ ಇಟ್ಟಿದ್ದ ಅಂಶ ಬೆಳಕಿಗೆ ಬಂದಿದೆ.
ಭಾರತದ ಎಜ್ಯುಟೆಕ್ ಸಂಸ್ಥೆ ಬೈಜೂಸ್ನ ಸಂಸ್ಥಾಪಕ ಬೈಜು ರವೀಂದ್ರನ್ ಸಂಸ್ಥೆಯ ಉದ್ಯೋಗಿಗಳಿಗೆ ವೇತನ ನೀಡುವ ಸಲುವಾಗಿ ತಮ್ಮ ಮನೆ ಹಾಗೂ ಕುಟುಂಬ ಸದಸ್ಯರ ಮಾಲೀಕತ್ವದ ನಿವೇಶನಗಳನ್ನು ಅಡಮಾನವಿರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಪ್ರಸ್ತುತ ಬೈಜೂಸ್ ತೀವ್ರ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿದ್ದು ನಗದು ಕೊರತೆಯನ್ನು ಪರಿಹರಿಸಲು ರವೀಂದ್ರನ್ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.

ಬೆಂಗಳೂರಿನ ಮನೆ ಅಡಮಾನ :
ಬೆಂಗಳೂರಿನಲ್ಲಿ ರವೀಂದ್ರನ್ ಕುಟುಂಬ ಎರಡು ಮನೆಗಳನ್ನು ಹೊಂದಿದ್ದು ಹಾಗೂ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಇದೆಲ್ಲರ ಒಟ್ಟು ಮೌಲ್ಯ ಅಂದಾಜು $12 ಮಿಲಿಯನ್ ಎಂಬುದಾಗಿ ತಿಳಿದುಬಂದಿದೆ. ಬೈಜೂಸ್ನಲ್ಲಿ ಉದ್ಯೋಗಿಗಳಾಗಿರುವ 15,000 ಸಿಬ್ಬಂದಿಗಳ ವೇತನಕ್ಕಾಗಿ ತಮ್ಮ ಮನೆಗಳನ್ನೇ ರವೀಂದ್ರನ್ ಅಡಮಾನವಿರಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದಾಗಿ ಅವರ ಕುಟುಂಬ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಬ್ಬಂದಿಯ ಸಂಬಳ ವಿಳಂಬಕ್ಕೆ ಏಕಾಏಕಿ ಉಂಟಾದ ತಾಂತ್ರಿಕ ದೋಷವೆಂದು ಬೈಜೂಸ್ ಕಾರಣ ನೀಡಿತ್ತು. ಅಲ್ಲದೆ ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಸ್ಪಷ್ಟನೆ ನೀಡಿತ್ತು. ಡಿಸೆಂಬರ್ 4ರ ಸೋಮವಾರದೊಳಗೆ ಸಂತ್ರಸ್ತ ಉದ್ಯೋಗಿಗಳ ವೇತನವನ್ನು ಅವರ ಖಾತೆಗಳಿಗೆ ಜಮೆ ಮಾಡುವ ಭರವಸೆಯನ್ನು ನೀಡಿತ್ತು. ಅಂತೆಯೇ ಇದೀಗ ರವೀಂದ್ರನ್ ಅವರು ತಮ್ಮ ಮನೆಯನ್ನೇ ಅಡವಿಟ್ಟು ಉದ್ಯೋಗಿಗಳ ವೇತನ ಪಾವತಿ ಮಾಡಿದ್ದಾರೆ ಎನ್ನಲಾಗಿದೆ.
ಹಲವು ವಿವಾದ :

ವಿವಾದ, ಸಂಕಷ್ಟಕ್ಕೆ ಸಿಲುಕಿರುವ ಕಂಪೆನಿ ಕಳೆದ ತಿಂಗಳು ಜಾರಿ ನಿರ್ದೇಶನಾಲಯವು ಬೈಜು ರವೀಂದ್ರನ್ ಮತ್ತು ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ಗೆ ₹ 9,362 ಕೋಟಿ ಮೊತ್ತದ ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪದ ಮೇಲೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಅಲ್ಲದೇ, ಪ್ರಾಯೋಜಕತ್ವದ ಹಣ ಬಾಕಿ ಉಳಿಸಿಕೊಂಡಿರುವ ಸಂಬಂಧ ಕಂಪನಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯೊಂದಿಗೂ ಸಂಸ್ಥೆ ವಿವಾದದಲ್ಲಿದೆ. ಕಂಪನಿ 158 ಕೋಟಿ ರೂ. ರಾಯಲ್ಟಿ ಪಾವತಿಸಿಲ್ಲ ಎಂದು ಆರೋಪಿಸಿ ಬಿಸಿಸಿಐ ರಾಷ್ಟ್ರೀಯ ಕಂಪನಿ ನ್ಯಾಯ ಮಂಡಳಿ (ಎನ್ಸಿಎಲ್ಟಿ) ಮೊರೆ ಹೋಗಿದೆ.
