ಮಂಗಳೂರು : ಬಿಯರ್ ಬಾಟಲಿಗಳನ್ನು ಶಾಲೆಯ ಮುಂದೆ ಯಾಕೆ ಎಸಿದಿರಿ ಎಂದು ಪ್ರಶ್ನಿಸಿದಕ್ಕೆ ಯುವಕನನ್ನು ಇರಿದು ಕೊಲೆ ಮಾಡಿರುವ ಘಟನೆ ಉಳ್ಳಾಲದ ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ನಡೆದಿದೆ.
ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿಯ ನಿವಾಸಿ ವರುಣ್ ಗಟ್ಟಿ (28) ಕೊಲೆಯಾದ ಯುವಕ.

ಕೊಲೆ ಮಾಡಿದ ಆರೋಪಿಗಳನ್ನು ಸೂರಜ್ ಮತ್ತು ರವಿರಾಜ್ ಎಂದು ಹೇಳಲಾಗಿದೆ. ಶಾಲೆಯ ಎದುರುಗಡೆ ಇರುವ ಕಟ್ಟೆಯ ಮೇಲೆ ಕುಳಿತು ಆರೋಪಿಗಳು ಬಿಯರ್ ಕುಡಿದಿದ್ದಾರೆ.
ಬಳಿಕ ಖಾಲಿಯಾಗಿರುವ ಬಿಯರ್ ಬಾಟಲಿಗಳನ್ನು ಶಾಲೆಯ ಎದುರುಗಡೆ ಇರುವ ರಸ್ತೆ ಮೇಲೆ ಇಬ್ಬರು ಆರೋಪಿಗಳು ಎಸೆದಿದ್ದಾರೆ. ಮೃತ ಯುವಕ ವರುಣ್ & ಆತನ ಸ್ನೇಹಿತ ಅಕ್ಷಯ್ ಬಿಯರ್ ಬಾಟಲಿ ಎಸೆದಿದ್ದನ್ನು ಪ್ರಶ್ನಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಸೂರಜ್, ರವಿರಾಜ್, ವರುಣ್ ಹಾಗೂ ಆತನ ಸ್ನೇಹಿತ ಅಕ್ಷಯ್ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಜಗಳ ಅತಿರೇಕಕ್ಕೆ ತಿರುಗಿ ಆರೋಪಿಗಳು ಹರಿತವಾದ ಆಯುಧದಿಂದ ವರುಣ್ ಬೆನ್ನಿಗೆ ಇರಿದಿದ್ದಾರೆ.
ಇದರಿಂದ ಗಂಭೀರವಾಗಿ ಗಾಯಗೊಂಡ ವರುಣ್ ತನ್ನ ಮನೆಗೆ ನಡೆದುಕೊಂಡು ಹೋಗಿದ್ದಾನೆ. ದಾರಿ ಉದ್ದಕ್ಕೂ ರಸ್ತೆಯಲ್ಲಿ ರಕ್ತ ಚೆಲ್ಲಿದೆ ಎನ್ನಲಾಗಿದೆ. ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ವರುಣ್ ಕೊನೆಯುಸಿರೆಳಿದಿದ್ದಾನೆ ಎನ್ನಲಾಗಿದೆ.
ಆರೋಪಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ. ಮೃತ ವರುಣ್ ಮಂಗಳೂರು ಮೂಡಾದ ಕಮಿಷನರ್ ವಾಹನ ಚಾಲಕನಾಗಿದ್ದ ಎಂದು ತಿಳಿದುಬಂದಿದೆ.