ನವದೆಹಲಿ : ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಲೋಕಸಭೆಯಿಂದ ಒಟ್ಟು 15 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಚಳಿಗಾಲದ ಅಧಿವೇಶನ ಮುಕ್ತಾಯಗೊಳ್ಳುವವರೆಗೆ 15 ಸಂಸದರನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆಯ 14 ಸಂಸದರು ರಾಜ್ಯಸಭೆಯ ಓರ್ವ ಸಂಸದನನ್ನು ಅಮಾನತುಗೊಳಿಸಲಾಗಿದೆ.
ಸಂಸತ್ ನ ಭದ್ರತಾ ಉಲ್ಲಂಘನೆ ವಿಷಯವಾಗಿ ಸಂಸದರು ಕೋಲಾಹಲ ಉಂಟುಮಾಡಿ ಸುಗಮ ಕಲಾಪಕ್ಕೆ ಅಡ್ಡಿ ಮಾಡಿದ್ದರು. ಅಶಿಸ್ತಿನ ನಡವಳಿಕೆಯ ಕಾರಣ ನೀಡಿ ಈ ಸಂಸದರನ್ನು ಅಮಾನತು ಮಾಡಲಾಗಿದೆ.
ಕನಿಮೋಳಿ, ಮಾಣಿಕಂ ಟ್ಯಾಗೋರ್, ಪಿಆರ್ ನಟರಾಜನ್, ವಿಕೆ ಶ್ರೀಕಂಠಂ, ಬೇನಿ ಬಹನ್, ಕೆ ಸುಬ್ರಮಣ್ಯಂ, ಎಸ್ಆರ್ ಪ್ರತಿಬನ್, ಎಸ್ ವೆಂಕಟೇಶನ್, ಮೊಹಮ್ಮದ್ ಜಾವೇದ್, ಟಿಎನ್ ಪ್ರತಾಪನ್, ಹೈಬಿ ಈಡನ್, ಎಸ್ ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅಮಾನತುಗೊಂಡಿದ್ದಾರೆ.

ಬುಧವಾರ (ಡಿ.13) ರಂದು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸಭಾಂಗಣಕ್ಕೆ ಜಿಗಿದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂಬ ಇಬ್ಬರು ವ್ಯಕ್ತಿಗಳಿಂದ ಉಂಟಾದ ಭದ್ರತಾ ಲೋಪವನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಕೋಲಾಹಲ ಸೃಷ್ಟಿಸಿ ಪ್ರತಿಭಟಿಸಿದ್ದರಿಂದ ಗುರುವಾರ ಲೋಕಸಭೆ ಕಲಾಪಕ್ಕೆ ಅಡ್ಡಿಯಾಗಿತ್ತು.
