ನವದೆಹಲಿ: ದೂರಸಂಪರ್ಕ ವಲಯವನ್ನು ನಿಯಂತ್ರಿಸುವ 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಕಾಯಿದೆಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸೋಮವಾರ ದೂರಸಂಪರ್ಕ ಮಸೂದೆ 2023 ಅನ್ನು ಲೋಕಸಭೆಯಲ್ಲಿ ಮಂಡಿಸಿದೆ.
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಟೆಲಿಕಾಂ ಮಸೂದೆಯನ್ನು ಮಂಡಿಸಿದರು. ಈ ಮಸೂದೆಗ ಕಳೆದ ಆಗಸ್ಟ್ನಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.
ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ತುರ್ತು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ಯಾವುದೇ ಮೊಬೈಲ್ ಸಂಪರ್ಕ ಸಂಸ್ಥೆಯ ನೆಟ್ವರ್ಕ್ ಅನ್ನು ತಾತ್ಕಾಲಿಕವಾಗಿ ತನ್ನ ವಶಕ್ಕೆ ಪಡೆಯಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.

ಅದೇ ರೀತಿ, ಪ್ರಸ್ತಾವಿತ ಶಾಸನವು ನಿರ್ದಿಷ್ಟ ವ್ಯಕ್ತಿಗಳಿಂದ ಕಳುಹಿಸಲಾದ ಅಥವಾ ಸ್ವೀಕರಿಸಿದ ನಿರ್ದಿಷ್ಟ ದೂರಸಂಪರ್ಕ ಸಾಧನಗಳ ಮೂಲಕ ಅಥವಾ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ಕೆಲವು ಸಂದೇಶಗಳನ್ನು “ಭಾರತದ ಸಾರ್ವಭೌಮತೆ, ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತೆ ಇರಬಾರದು” ಎಂದು ಸೂಚನೆ ನೀಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ.
ಕರಡು ಕಾಯಿದೆಯೂ ಹೀಗೆ ಹೇಳುತ್ತದೆ:
ವಿಪತ್ತು ನಿರ್ವಹಣೆ ಸೇರಿದಂತೆ ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ವಿಶೇಷವಾಗಿ ಅಧಿಕಾರ ಪಡೆದ ಯಾವುದೇ ಅಧಿಕಾರಿ, ಅಧಿಸೂಚನೆಯ ಮೂಲಕ ಯಾವುದೇ ಅಧಿಕೃತ ಘಟಕದ ಯಾವುದೇ ದೂರಸಂಪರ್ಕ ಸೇವೆ ಅಥವಾ ದೂರಸಂಪರ್ಕ ಜಾಲವನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಬಹುದು ಅಥವಾ ಸ್ಥಗಿತಗೊಳಿಸಬಹುದು.
ಇನ್ನು ಈ ಕಾಯ್ದೆಯನ್ವಯ ಮಾನ್ಯತೆ ಹೊಂದಿದ ಪತ್ರಕರ್ತರು ಕಳಿಸುವ ಸಂದೇಶಗಳನ್ನ ತಡೆ ಹಿಡಿಯುವಂತಿಲ್ಲ. ರಾಷ್ಟ್ರೀಯ ಭದ್ರತೆ ಹಾಗೂ ಹಿತಾಸಕ್ತಿಗೆ ಧಕ್ಕೆ ತರದ ರೀತಿ ಇರುವ ಯಾವುದೇ ಸಂದೇಶವನ್ನೂ ತಡೆ ಹಿಡಿಯಬಾರದು ಎಂದೂ ಪ್ರಸ್ತಾವಿತ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.


































