ನವದೆಹಲಿ : ವಾರಾಣಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಲಾಗಿದೆ.
ಸಂಪೂರ್ಣವಾಗಿ ಸೀಲ್ ಮಾಡಿದ ದಾಖಲೆಯನ್ನು ಭಾರತೀಯ ಪುರಾತತ್ವ ಇಲಾಖೆಯು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಭಾರತೀಯ ಪುರಾತತ್ವ ಇಲಾಖೆ ತನ್ನ ಸಂಶೋಧನೆಗಳನ್ನು ಸಲ್ಲಿಸಲು ನಿಗದಿಪಡಿಸಿದ ಸಮಯಕ್ಕಿಂತ ಆರು ಅವಧಿ ವಿಸ್ತರಣೆಗಳನ್ನು ತೆಗೆದುಕೊಂಡಿತ್ತು. ಅಧ್ಯಯನ ಮತ್ತು ವಿಶ್ಲೇಷಣೆ ಮಾಡಬೇಕಾದ ಅಪಾರ ಪ್ರಮಾಣದ ಡೇಟಾವನ್ನು ಉಲ್ಲೇಖಿಸಿದೆ.

ನವೆಂಬರ್ 2ರಂದು ಸಮೀಕ್ಷೆಯನ್ನು ಮುಗಿಸಿದ್ದೇನೆ ಎಂದು ತಿಳಿಸಿದೆ. ಆದರೆ ಸಮೀಕ್ಷೆಯ ಸಮಯದಲ್ಲಿ ಬಳಸಿದ ಉಪಕರಣಗಳ ವಿವರಗಳನ್ನು ಸಲ್ಲಿಸುವುದು ಸೇರಿದಂತೆ ವರದಿಯನ್ನು ಸಮಗ್ರವಾಗಿ ಮಂಡಿಸಲು ಹೆಚ್ಚಿನ ಸಮಯವನ್ನು ಕೇಳಿದೆ.
ಇದೀಗ ವರದಿ ಸಲ್ಲಿಕೆಯಾಗಿದ್ದು, ಇದನ್ನು ಸಾರ್ವಜನಿಕಗೊಳಿಸಲಾಗುತ್ತದೆಯೇ, ಅಥವಾ ಹಿಂದೂ ಮತ್ತು ಮುಸ್ಲಿಂ ಅರ್ಜಿದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ.
17ನೇ ಶತಮಾನದ ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆಯೇ ಎಂದು ಪರಿಶೀಲಿಸಲು ಸಮೀಕ್ಷೆಯನ್ನು ಉದ್ದೇಶಿಸಲಾಗಿತ್ತು. ವಾರಣಾಸಿ ನ್ಯಾಯಾಲಯ ಮಸೀದಿ ಒಳಭಾಗದಲ್ಲಿ ಉತ್ಖನನಕ್ಕೆ ಅವಕಾಶ ನೀಡಿತ್ತು.

