ಹಾವೇರಿ: ನೀರಿನಲ್ಲಿ ಮುಳುಗಿ ಮಕ್ಕಳು ಸಾವನ್ನಪ್ಪಿದ್ದು, ಮಕ್ಕಳನ್ನು ಬದುಕಿಸುವ ನಿಟ್ಟಿನಲ್ಲಿ ಪೋಷಕರು ಉಪ್ಪಿನಲ್ಲಿ ಮೃತದೇಹಗಳನ್ನಿಟ್ಟು ಪರದಾಡುತ್ತಿದ್ದ ಹೃದಯ ವಿದ್ರಾವಕ ಘಟನೆಯೊಂದು ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಕಾಗಿನೆಲೆ ಸಮೀಪದ ಗ್ರಾಮದಲ್ಲಿ ಡಿಸೆಂಬರ್ 24 ರಂದು ಘಟನೆ ವರದಿಯಾಗಿದೆ.
ಹೇಮಂತ್ (12) ಮತ್ತು ನಾಗರಾಜ್ (11) ಮೃತ ಬಾಲಕರಯ. ಇವರು ಗ್ರಾಮದ ಕೆರೆಯ ಬಳಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ದಡದಲ್ಲಿ ಮಕ್ಕಳ ಬಟ್ಟೆಗಳನ್ನು ಕಂಡ ಕೆಲವು ಗ್ರಾಮಸ್ಥರು ಬಾಲಕರನ್ನು ಹುಡುಕಲು ಆರಂಭಿಸಿದ್ದಾರೆ. ಈ ವೇಳೆ ಬಾಲಕರ ಮೃತದೇಹಗಳು ಪತ್ತೆಯಾಗಿವೆ. ಈ ವೇಳೆ ಕೆಲ ಗ್ರಾಮಸ್ಥರು ಮೃತದೇಹಗಳನ್ನು ಉಪ್ಪಿನಲ್ಲಿಟ್ಟರೆ ಮರಳಿ ಬದುಕಬಹುದು ಎಂದು ಸಲಹೆ ನೀಡಿದ್ದಾರೆ.
ಇದನ್ನು ನಂಬಿ ಕ್ವಿಂಟಾಲ್ಗಟ್ಟಲೆ ಉಪ್ಪು ತರಿಸಿಕೊಂಡು ಅವರನ್ನು ಅದರಲ್ಲಿ ಹೂತಿಟ್ಟಿದ್ದಾರೆ. ಆದರೆ, ಸುಮಾರು ಆರು ಗಂಟೆಗಳ ಕಾಲ ಹಾಗೆ ಹೂತಿಟ್ಟರೂ ಮಕ್ಕಳು ಮತ್ತೆ ಬರಲಿಲ್ಲ. ಹೆತ್ತವರು ಆಗಾಗ ಹೋಗಿ ಉಸಿರಾಡುತ್ತಿದ್ದಾರಾ ಎಂದು ನೋಡಿಬರುತ್ತಿದ್ದರು. ಆದರೆ, ಯಾವ ಲಕ್ಷಣವೂ ಕಾಣಿಸಲಿಲ್ಲ.
ಆದರೆ, ತುಂಬಾ ಹೊತ್ತು ಇದೇ ರೀತಿ ಕಾಯುವುದು, ಅಳುವನ್ನು ನೋಡಲಾಗದೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ಕುಟುಂಬಕ್ಕೆ ತಿಳಿ ಹೇಳಿದರು. ಒಮ್ಮೆ ಪ್ರಾಣ ಕಳೆದುಹೋದರೆ ಮತ್ತೆ ಬರುವುದಿಲ್ಲ. ನೀವು ಯಾವುದೇ ಸುಳ್ಳು ಮಾಹಿತಿಗಳನ್ನು ನಂಬಿ ಮಕ್ಕಳ ಅಂತ್ಯಕ್ರಿಯೆ ತಡ ಮಾಡಬೇಡಿ. ಮೃತದೇಹ ಇಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ ಎಂದು ಮನವರಿಕೆ ಮಾಡಿದರು. ಕೊನೆಗೆ ಹೆತ್ತವರು ಶವಗಳ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಟ್ಟರು.
