ಬೆಂಗಳೂರು : ಇಂದಿನಿಂದ ರಾಜ್ಯದ ದೇವಾಲಯಗಳು ಹಾಗೂ ಬೆಂಗಳೂರಿನ ದೇವಾಲಯಗಳಲ್ಲಿ ಭಾರತೀಯ ಉಡುಪುಗಳನ್ನು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ.
ಇಂದು ವಸಂತನಗರದ ಶ್ರೀಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ದೇಗುಲಗಳಿಗೆ ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ.
ಭಾರತೀಯ ಉಡುಪು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಕರ್ನಾಟಕ ದೇವಸ್ಥಾನ ಮಹಾಸಂಘ ದೇಗುಲಗಳ ಮುಂದೆ ಬೋರ್ಡ್ ಹಾಕಲಿದೆ.

ಮುಜರಾಯಿ ಇಲಾಖೆ ಈ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ, ಆದರೆ ಆಯಾ ದೇವಸ್ಥಾನದ ಆಚಾರಸಂಹಿತೆಗೆ ಅನುಗುಣವಾಗಿ ನಿಯಮಗಳನ್ನು ಪಾಲಿಸಲಾಗುತ್ತಿದೆ.ದೇವಾಲಯಕ್ಕೆ ಚಡ್ಡಿ, ಬರ್ಮುಡಾ, ಹರಿದ ಜೀನ್ಸ್, ಎದೆ ಕಾಣುವ ಟಿಶರ್ಟ್ ಧರಿಸಿಕೊಂಡು ಬರುವಂತಿಲ್ಲ. ಮಹಿಳೆಯರು ಸ್ಕರ್ಟ್, ಮಿಡಿ, ಹರಿದ ಜೀನ್ಸ್, ಶಾರ್ಟ್ಸ್ ಹಾಕಿಕೊಂಡು ಬಂದರೆ ದೇವಸ್ಥಾನಕ್ಕೆ ಎಂಟ್ರಿ ಇರೋಲ್ಲ. ದಕ್ಷಿಣ ಕನ್ನಡ-ಉಡುಪಿಯ ಕೆಲವು ದೇವಾಲಯಗಳಲ್ಲಿ ಪುರುಷರು ಅಂಗಿ ಧರಿಸಿ ದೇವಾಲಯದ ಒಳಗ ಹೋಗುವಂತಿಲ್ಲ, ಅಂಗಿ ಹಾಗೂ ಬನಿಯನ್ ಕಳಚಿಟ್ಟು ದೇವಾಲಯ ಪ್ರವೇಶಿಸಬೇಕು.
ದೇವಾಲಯದ ಒಳಗೆ ವಸ್ತ್ರಸಂಹಿತೆ ಪಾಲಿಸುವಂತೆ, ವಿದೇಶಿ ವಸ್ತ್ರಗಳು ಹಾಗೂ ತುಂಡುಡುಗೆ ಧರಿಸಿದವರಿಗೆ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಈ ಹಿಂದೆ ಒತ್ತಾಯಿಸಿತ್ತು. ಇದಕ್ಕೆ ಹಿಂದೂ ಸಂಘಟನೆಗು ಬೆಂಬಲ ವ್ಯಕ್ತಪಡಿಸಿದ್ದವು. ದೇವಾಲಯಗಳ ಒಳಗೆ ತುಂಡು ಬಟ್ಟೆಗಳನ್ನು ಧರಿಸಿ ಬರುವ ಯುವಕ ಯುವತಿಯರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿದ್ದವು.
ಕಳೆದ ತಿಂಗಳು ರಾಜ್ಯದ ಎಲ್ಲ ದೇವಾಲಯ ಮತ್ತು ಮಠಗಳ ಅರ್ಚಕರು ಮತ್ತು ಟ್ರಸ್ಟಿಗಳು ನಡೆಸಿದ್ದರು. ಸಭೆಯಲ್ಲಿ ರಾಜ್ಯದ ಎಲ್ಲ ಅರ್ಚಕರು ಹಾಗೂ ಟ್ರಸ್ಟಿಗಳು ಜನವರಿಯಿಂದ ಈ ನಿಯಮವನ್ನು ಜಾರಿ ಮಾಡಬೇಕೆಂದು ತೀರ್ಮಾನಿಸಿದ್ದರು. ಹೀಗಾಗಿ ಇಂದಿನಿಂದ ಬೆಂಗಳೂರಿನ ರಾಜ್ಯದ ಎಲ್ಲ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ.



































