ಹೈದರಾಬಾದ್: ಟಾಲಿವುಡ್ ಕಿರುತೆರೆ ಲೋಕದಲ ನಿರೂಪಕಿ ಹಾಗೂ ನಟಿ ರಶ್ಮಿ ಗೌತಮ್ ಅವರಿಗೆ ಸಖತ್ ಕ್ರೇಜ್ ಇದೆ. ತಮ್ಮ ಸೌಂದರ್ಯ, ನಟನೆ ಮತ್ತು ಆಕರ್ಷಕ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಾರೆ. ರಶ್ಮಿ ಅವರು ಜನಪ್ರಿಯ ರಿಯಾಲಿಟಿ ಶೋ ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಜನಪ್ರಿಯ ಆ್ಯಂಕರ್ ಆಗಿ ಖ್ಯಾತಿ ಪಡೆದವರು. ಅಲ್ಲದೆ, ಹಲವು ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡರು.
ರಶ್ಮಿ ಅವರು ಪ್ರಾಣಿ ಪ್ರೇಮಿಯೂ ಹೌದು. ಕೊರೊನಾ ಸಂದರ್ಭದಲ್ಲಿ ನಾಯಿಗಳಿಗೆ ಆಹಾರ, ನೀರು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ನಾಯಿಗೆ ಏನಾದರೂ ಆಪತ್ತು ಬಂದರೆ ಮೊದಲು ಮುಂದೆ ಬರುತ್ತಾರೆ. ಮೂಕ ಜೀವಿಗಳಿಗೆ ಹಿಂಸೆ ನೀಡುವವರ ಮೇಲೆ ಆಕ್ರೋಶ ಹೊರಹಾಕುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ, ಸಾಮಾಜಿಕ ಮತ್ತು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ, ಅದಕ್ಕೆ ಕಾರಣರಾದವರ ವಿರುದ್ಧ ಧ್ವನಿ ಎತ್ತುತ್ತಾರೆ. ಇದರ ನಡುವೆ ಇತ್ತೀಚೆಗೆ ರಶ್ಮಿ ಅವರು ಮಾಡಿರುವ ಒಂದು ಪೋಸ್ಟ್ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ರಶ್ಮಿ ಗೌತಮ್ ತುಂಬಾ ಸಕ್ರಿಯರಾಗಿರುತ್ತಾರೆ. ಅವರು ಮಾಡುವ ಪ್ರತಿ ಪೋಸ್ಟ್ ಸೆಕೆಂಡ್ಗಳಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗಷ್ಟೇ ಆಕೆ ಶೇರ್ ಮಾಡಿಕೊಂಡ ಇನ್ಸ್ಟಾಗ್ರಾಂ ಸ್ಟೋರಿ ವೈರಲ್ ಆಗಿದೆ. ವ್ಯಭಿಚಾರ ಮತ್ತು ಮಹಿಳೆಯರ ಕುರಿತಾದ ಈ ಪೋಸ್ಟ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ರಶ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಖ್ಯಾತ ಲೇಖಕಿ ರಾಚೆಲ್ ಮೊರಾನ್ ಬರೆದ ಕೋಟ್ ಅನ್ನು ಹಂಚಿಕೊಂಡಿದ್ದಾರೆ. ಮಹಿಳೆಯರು ಬಡತನದಲ್ಲಿರುವಾಗ ಮತ್ತು ಹಸಿವಿನಿಂದ ಬಳಲುತ್ತಿರುವಾಗ ನಾವು ಮನುಷ್ಯರಾಗಿ ಅವರ ಬಾಯಿಗೆ ಆಹಾರ ಇಡಬೇಕೆ ಹೊರತು ಡಿಕ್ (ಖಾಸಗಿ ಅಂಗ) ಅಲ್ಲ ಎಂಬ ರಾಚೆಲ್ ಮೊರಾನ್ ಕೋಟ್ ಅನ್ನು ಶೇರ್ ಮಾಡಿದ್ದಾರೆ.
ಪುರುಷರು ಒಳ್ಳೆಯವರಾಗಿದ್ದರೆ ವ್ಯಭಿಚಾರ ಎಂಬುದೇ ಇರುವುದಿಲ್ಲ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ರಶ್ಮಿ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣ ಹಿನ್ನೆಲೆ ಈ ಪೋಸ್ಟ್ ಮಾಡಿರಬಹುದು ಎನ್ನಲಾಗಿದೆ. ಮಹಿಳಾ ಪರ ಹೋರಾಟಗಾರ್ತಿ ಹಾಗೂ ಗಾಯಕಿ ಚಿನ್ಮಯಿ ಶ್ರೀಪಾದ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಇದೇ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಕೇಸ್ಗೆ ಸಂಬಂಧಿಸಿದ ಪ್ರತಿಕ್ರಿಯೆ ಎನ್ನಲಾಗಿದೆ. ಏಕೆಂದರೆ, ಚಿನ್ಮಯಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ನಿರಂತರವಾಗಿ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಟ್ವಿಟ್ ಮಾಡುತ್ತಲೇ ಇದಾರೆ.

