ಮುಂಬೈ : ಜೂನ್ ನಾಲ್ಕರ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ನಂತರ, ಬಿಜೆಪಿಯು ಎರಡು ಭಾಗವಾಗಿ ಇಬ್ಬಾಗವಾಗಲಿದೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ ಭವಿಷ್ಯ ನುಡಿದಿದ್ದಾರೆ. ಪ್ರಧಾನಿಯ ಹೇಳಿಕೆಗೆ ಪ್ರತ್ಯುತ್ತರವಾಗಿ ಠಾಕ್ರೆ ಈ ಹೇಳಿಕೆಯನ್ನು ನೀಡಿದ್ದಾರೆ.
ಸದ್ಯದಲ್ಲಿ ಶಿವಸೇನೆಯ ಠಾಕ್ರೆ ಬಣ ಮತ್ತು ಎನ್ಸಿಪಿಯ ಶರದ್ ಪವಾರ್ ಬಣ ಕಾಂಗ್ರೆಸ್ ಜೊತೆ ವಿಲೀನಗೊಳ್ಳಲಿದೆ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಕೌಂಟರ್ ಆಗಿ ಠಾಕ್ರೆ ಈ ಹೇಳಿಕೆಯನ್ನು ನೀಡಿದ್ದಾರೆ.
ನೀವು ನಮ್ಮ ಪಕ್ಷ ಕಾಂಗ್ರೆಸ್ ಜೊತೆ ವಿಲೀನಗೊಳ್ಳಲಿದೆ ಎನ್ನುವ ಮಾತನ್ನು ಹೇಳಿದ್ದೀರಿ, ನಾವು ನಿಮ್ಮ ಮೈತ್ರಿಕೂಟದ ಜೊತೆ ಮೂವತ್ತು ವರ್ಷ ಇದ್ದೆವು. ನಾವು ಎಂದಾದರೂ ಶಿವಸೇನೆಯು ಬಿಜೆಪಿ ಜೊತೆ ವಿಲೀನಗೊಳ್ಳುವುದರ ಬಗ್ಗೆ ಚರ್ಚಿಸಿದ್ದೇವಾ ಎಂದು ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ.

ನಾವು ಕಾಂಗ್ರೆಸ್ ಜೊತೆ ವಿಲೀನಗೊಳ್ಳುವುದು ಬಿಡುವುದು ನಮ್ಮ ಆಂತರಿಕ ವಿಚಾರ, ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಡಿ. ಜೂನ್ ನಾಲ್ಕಕ್ಕೆ ಫಲಿತಾಂಶ ಬರಲಿದೆ, ಅದಾದ ನಂತರ ಬಿಜೆಪಿಯು ಹೋಳಾಗಲಿದೆ ಎಂದು ಉದ್ಧವ್ ಠಾಕ್ರೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ಕೂಡಲೇ, ತಮ್ಮ ನಿಯತ್ತನ್ನು ಬದಲಿಸಿ ಮೂಲ ಪಕ್ಷವನ್ನು ಬಿಟ್ಟು, ಬಿಜೆಪಿಗೆ ಸೇರಿದ ಯಾರನ್ನೂ ಬಿಡುವುದಿಲ್ಲ ಎಂದು ಠಾಕ್ರೆ ಹೇಳುವ ಮೂಲಕ, ದ್ವೇಷ ರಾಜಕಾರಣದ ಮಾತನ್ನಾಡಿದ್ದಾರೆ.

