ಕಾಪು : ಶಿರ್ವದ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ – ರಕ್ಷಕರ ಪ್ರಥಮ ಸಭೆ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನೋರ್ಬರ್ಟ್ ಮಾರ್ಟೀಸ್ ಮಾತನಾಡಿ, ಪೋಷಕರ ಇಂದಿನ ಸವಾಲುಗಳು ಮತ್ತು ಅವುಗಳನ್ನು ಎದುರಿಸುವ ಬಗೆಯನ್ನು ತಮ್ಮ ಅನುಭವದ ಆಧಾರದ ಮೇರೆಗೆ ತಿಳಿಸಿದರು. ವಿದ್ಯಾರ್ಥಿಗಳು ಕೂಡ ತಮ್ಮ ಹೆತ್ತವರು ಹಾಗೂ ಶಿಕ್ಷಕರನ್ನು ಗೌರವಿಸುವ ಮೂಲಕ ಶಿಕ್ಷಣದಲ್ಲಿ ಸಾಧನೆಯ ಶಿಖರವನ್ನು ಏರಬಹುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಧರ್ಮ ಗುರು ವೆರಿ ರೆವೆರೆಂಡ್ ಫಾದರ್ ಡಾ| ಲೆಸ್ಲಿ ಕ್ಲೀಫರ್ಡ್ ಡಿಸೋಜ, ಶಿಕ್ಷಣವು ವ್ಯಾಪಾರೀಕರಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಂತ ಮೇರಿ ಪದವಿ ಪೂರ್ವ ಕಾಲೇಜು ಹೇಗೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ತನ್ನ ಬದ್ಧತೆಯನ್ನು ಹೊಂದಿರುವ ಬಗ್ಗೆ ತಿಳಿಸಿದರು. ಈ ಕೈಂಕರ್ಯದಲ್ಲಿ ಸಹಕರಿಸುತ್ತಿರುವ ಸಂಸ್ಥೆಯ ಎಲ್ಲಾ ಉದ್ಯೋಗಿಗಳನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಸ್ಥಳೀಯ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ Ln. ಮೆಲ್ವಿನ್ ಅರಾನ್ಹ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ Ln. ನೊರ್ಬರ್ಟ್ ಮಚಾಡೊ ಹಾಗೂ ಸಂಸ್ಥೆಯ ಪ್ರಾಂಶುಪಾಲ ಜಯಶಂಕರ್ ಕೆ. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 98% ಅಂಕಗಳಿಸಿದ ವಿದ್ಯಾರ್ಥಿ ಗ್ಲೇನ್ಸನ್ ಡಯಾಜ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸತತ ಮೂರು ವರ್ಷಗಳಿಂದ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನಗದು ಸಹಿತ ಗೌರವಾರ್ಪಣೆಯ ಪ್ರಾಯೋಜಕಿ, ಸಂಸ್ಥೆಯ ಇತಿಹಾಸ ಉಪನ್ಯಾಸಕಿ ಮರಿಯಾ ಜೆಸಿಂತಾ ಫುರ್ಟಾಡೋ ಅವರನ್ನು ಗೌರವಿಸಲಾಯಿತು.
ಉಪನ್ಯಾಸಕಿ ಗ್ಲೆನಿಶಾ ರೇಷ್ಮಾ ಮೆಂಡೋನ್ಸಾ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಮಮತಾ ಸಾಧಕರ ಪಟ್ಟಿಯನ್ನು ವಾಚಿಸಿದರು. ಪ್ರಾಂಶುಪಾಲ ಜಯಶಂಕರ್ ಕೆ. ಸ್ವಾಗತಿಸಿ, ಉಪನ್ಯಾಸಕಿ ಪ್ರಭಾ ಶೆಣೈ ವಂದಿಸಿದರು. ಉಪನ್ಯಾಸಕಿ ತಿಲಕಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

