ಚಿಕ್ಕಮಗಳೂರು : ಪ್ರಿಯತಮೆ ಎರಡು ವರ್ಷಗಳಿಂದ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರೂ ಆಕೆಯನ್ನೇ ವರಿಸಿ ಚಿಕ್ಕಮಗಳೂರಿನ ಭಕ್ತರಹಳ್ಳಿಯ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಮನು ಹಾಗೂ ಸ್ವಪ್ನಾ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದ್ದಕ್ಕಿದ್ದಂತೆ ಎರಡು ವರ್ಷಗಳ ಹಿಂದೆ ಸ್ವಪ್ನಾ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ವೀಲ್ ಚೇರ್ ನಲ್ಲೇ ಕೂತಿರಬೇಕು, ಸಾಗಬೇಕಾದ ಪರಿಸ್ಥಿತಿ.
ತನಗೆ ಹೀಗಾಗಿರುವ ಕಾರಣ ಮನುವಿನಲ್ಲಿ ಸ್ವಪ್ನಾ ಬೇರೆ ಹುಡುಗಿಯನ್ನು ವಿವಾಹವಾಗಲು ತಿಳಿಸಿದ್ದು, ಆತ ಕೇಳದೆ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಕೆಯನ್ನೇ ವಿವಾಹವಾಗಿ ಪ್ರೇಮದ ಶ್ರೇಷ್ಠತೆ ಮೆರೆದಿದ್ದಾನೆ. ಈಗಾಗಲೇ ಸ್ವಪ್ನಾಳ ಚಿಕಿತ್ಸೆಗಾಗಿ ಮನು ಹಲೆವೆಡೆ ಅಲೆದಿದ್ದಾನೆ. ಇಬ್ಬರದೂ ಬಡ ಕುಟುಂಬವಾಗಿದ್ದು, ಮನು ಹಾರ್ಡ್ವೇರ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಪ್ರೇಯಸಿಗೆ ಹೀಗಾದ ಮೇಲೆ ಹಳ್ಳಿಯಲ್ಲಿಯೇ ಕೆಲಸ ಮಾಡಿಕೊಂಡಿದ್ದಾನೆ.

ವಿಶೇಷ ಅಂದ್ರೆ ಮನು ತಾಯಿಯೂ ಮನು ಆಸೆಗೆ ಭಂಗ ತಾರದೇ ಸ್ವಪ್ನಾಳನ್ನು ಸೊಸೆಯಾಗಿ ಸ್ವೀಕರಿಸಿರೋದು. ಎಲ್ಲಾ ಸರಿಯಿದ್ದರೂ, ಪ್ರೀತಿಯ ವಿಚಾರವಾಗಿ ಆಟ ಆಡೋರು ಒಂದ್ಕಡೆಯಾದರೆ, ಮನುವಿನಂತವರು ಒಲವಿಗೆ ನಿಜವಾದ ಅರ್ಥ ಕಲ್ಪಿಸುತ್ತಿರೋದು ನಿಜಕ್ಕೂ ಶ್ಲಾಘನೀಯ.





