ಮಂಗಳೂರು : ಪಬ್ಜಿ ಆಡಲು ಹೋಗಿದ್ದ ಬಾಲಕ ಗೆಳೆಯನಿಂದಲೇ ಹತ್ಯೆಯಾದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಹಕೀಫ್(12) ಮೃತ ಬಾಲಕ. 16 ವರ್ಷದ ದೀಪಕ್ ಎಂಬಾತ ಕೊಲೆ ನಡೆಸಿರುವ ಹುಡುಗ. ಆಲ್ ಲೈನ್ ನಲ್ಲಿ ಎಲ್ಲರನ್ನೂ ಹಕೀಫ್ ಸೋಲಿಸುತ್ತಿದ್ದ, ಹಾಗಾಗಿ ದೀಪಕ್ ಕೂಡ ಎದುರು ಬದುರು ಕೂತು ಆಡುವಂತೆ ಪಂಥಾಹ್ವಾನ ನೀಡಿದ್ದ ಎನ್ನಲಾಗಿದೆ. ಹೀಗಾಗಿ ಹಕೀಫ್ ಪಬ್ಜಿ ಆಡುವ ಸಲುವಾಗಿ ರಾತ್ರಿ ತೆರಳಿದ್ದ ಎನ್ನಲಾಗಿದೆ. ಆಟದಲ್ಲಿ ಹಕೀಫ್ ಸೋತಿದ್ದು, ಮೊದಲು ಹಕೀಫ್ ನೇ ದೀಪಕ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಪ್ರತಿಯಾಗಿ ದೀಪಕ್ ಹಲ್ಲೆ ನಡೆಸಿ, ದೊಡ್ಡ ಕಲ್ಲಿನಿಂದ ಎತ್ಹಾಕಿದ್ದಾನೆ. ಈ ವೇಳೆ ಕುಸಿದು ಬಿದ್ದಿದ್ದಾನೆ ಎಂದು ದೀಪಕ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ :
ರಾತ್ರಿ ಆಟವಾಡಲು ಹೋದ ಹಕೀಫ್ ತಡರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಪೋಷಕರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನೂ ದಾಖಲಿಸಿದ್ದರು.
ಭಾನುವಾರ ಬೆಳಿಗ್ಗೆ ಬಾಲಕನ ಶವ ಕೆ.ಸಿ.ರೋಡ್ ಮೈದಾನದಲ್ಲಿ ಪತ್ತೆಯಾಗಿತ್ತು. ಶವದ ಮೇಲೆ ಗಾಯದ ಗುರುತುಗಳಿದ್ದು, ಕಲ್ಲಿನಿಂದ ಜಜ್ಜಿದ ಗಾಯವಿತ್ತು. ಶವವನ್ನು ಎಲೆಗಳಿಂದ ಮುಚ್ಚಿಡುವ ಪ್ರಯತ್ನ ಮಾಡಲಾಗಿತ್ತು. ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.



