ಬೆಂಗಳೂರು : ಸ್ಮಶಾನಕ್ಕೆ ಶವ ಸಾಗಿಸಲು 60 ಸಾವಿರ ರೂಪೈ ಬೇಡಿಕೆಯಿಟ್ಟಿದ್ದ ಆ್ಯಂಬುಲೆನ್ಸ್ ಚಾಲಕನನ್ನು ಬಂಧಿಸಲಾಗಿದೆ. ಹನುಮಂತಪ್ಪ ಸಿಂಗ್ರಿ ಹಾಗೂ ಹರೀಶ್ ಬಂಧಿತ ಆರೋಪಿಗಳು. ಚಿತಾಗಾರಕ್ಕೆ ಶವವನ್ನು ಸಾವಿರ ಸಾಗಿಸಲು ಆರೋಪಿಗಳು 60 ಸಾವಿರ ಬೇಡಿಕೆ ಇಟ್ಟಿದ್ರು. ಈ ವೇಳೆ ಕುಟುಂಬಸ್ಥರು 16 ಸಾವಿರ ರೂ. ನೀಡಿದ್ದಾರೆ. ಉಳಿದ ಹಣ ನೀಡದಿದ್ದರೆ ಶವವನ್ನು ರಸ್ತೆಗೆ ಎಸೆಯುವುದಾಗಿ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಏನಿದು ಪ್ರಕರಣ?
ಏಪ್ರಿಲ್ 20 ರಂದು ಪ್ರಸಾದ್ ಎಂಬವರು ಕೊರೋನಾದಿಂದ ಮೃತಪಟ್ಟಿದ್ದು, ಆ್ಯಂಬುಲೆನ್ಸ್ ಮೂಲಕ ಚಿತಾಗಾರಕ್ಕೆ ಸಾಗಿಸಲು ಜೈ ಹನುಮಾನ್ ಆ್ಯಂಬುಲೆನ್ಸ್ ಮಾಲೀಕ ಹಾಗೂ ಚಾಲಕ ಹನುಮಂತಪ್ಪ ಮತ್ತು ನಂದನ ಇಂಟರ್ ನ್ಯಾಷನಲ್ ಆ್ಯಂಬುಲೆನ್ಸ್ ಮಾಲೀಕ ಹರೀಶ್ ಎಂಬುವವರನ್ನು ಸಂಪರ್ಕಿಸಲಾಗಿದೆ. ಈ ಸಂದರ್ಭ ಆರೋಪಿಗಳು 60 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದಾರೆ. ಈ ವೇಳೆ ಮೃತರ ಮಗಳು ಮಾಂಗಲ್ಯ ಸರ ಮಾರಿ ಹಣ ನೀಡಲು ಮುಂದಾಗಿದ್ದು, ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗಿತ್ತು. ಅಮೃತಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆ್ಯಂಬುಲೆನ್ಸ್ ವಶಪಡಿಸಿಕೊಂಡಿದ್ದಾರೆ.




