ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕರೋನ ರೋಗವನ್ನು ತಡೆಗಟ್ಟಬೇಕಾದರೆ ಆದಾಯವಿಲ್ಲದ ದಿನಗೂಲಿ ಕಾರ್ಮಿಕರಿಗೆ ಜೀವನಾಶ್ಯಕ ಅಗತ್ಯ ವಸ್ತುಗಳನ್ನು ಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಡೀ ಸಂಪನ್ಮೂಲಗಳನ್ನು ಬಳಸಿ ಪರಿಹಾರ ಹಣ ಮುಂದಿನ ಮೂರು ತಿಂಗಳವರೆಗೆ ರೂ.10 ಸಾವಿರವನ್ನು ಕಾರ್ಮಿಕರಿಗೆ ಕೃಷಿ ಕೂಲಿಕಾರರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿ ಇಂದು ಸಿಐಟಿಯು ಕೃಷಿ ಕೂಲಿಕಾರರಸಂಘ, ಪ್ರಾಂತ ರೈತಸಂಘಗಳ ನೇತ್ರತ್ವದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ಕುಂದಾಪುರದಲ್ಲಿ ಜರುಗಿತು.
ರಾಜ್ಯದಲ್ಲಿ ವಾರ್ಷಿಕ ಐದು ಲಕ್ಷಕ್ಕಿಂತಲೂ ಕಡಿಮೆ ಆದಾಯವಿರುವ ಜನಸಂಖ್ಯೆಯನ್ನು ನೋಡಿದರೆ 1.5 ಕೋಟಿ ಕುಟುಂಬಗಳಿವೆ. ಈ ಪರಿಹಾರ ಕೊಡಲು ಒಟ್ಟು ಹದಿನೈದು ಸಾವಿರ ಕೋಟಿಗಳಷ್ಟು ಹಣ ಸಾಕಾಗುತ್ತದೆ. ರಾಜ್ಯದಿಂದ ಪಿಎಂ ಕೇರ್ಸ್ ನಿಧಿಗೆ ನೀಡಲಾಗಿರುವ ಸಾವಿರಾರು ಕೋಟಿಗಳು ಹಾಗೂ ರಾಜ್ಯದ ಸಿಎಸ್ ಆರ್ ಫಂಡ್ ಗಳನ್ನು ಕ್ರೋಡಿಕರಿಸಿದರೆ ಇದು ದೊಡ್ಡ ವೆಚ್ಚವಾಗಲಾರದು.
ಪ್ರತಿಯೊಬ್ಬರಿಗೂ 10 ಕೆಜಿ ಪೌಷ್ಠಿಕಾಂಶ ಆಹಾರ ಧಾನ್ಯಗಳನ್ನು ವಿತರಿಸಬೇಕು. ಪ್ರತಿಯೊಬ್ಬರಿಗೂ ಸರಕಾರ ಉಚಿತ ಲಸಿಕೆಗಳನ್ನು ನೀಡಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಲ್ಲರಿಗೂ ವ್ಯಾಕ್ಸಿನ್, ಆಕ್ಸಿಜನ್ ಕೊರತೆಯಾಗದಂತೆ ಸಮರೋಪಾದಿಯಲ್ಲಿ ಸರಕಾರ ಕೆಲಸ ಮಾಡಬೇಕು. ಕೋವಿಡ್ ನಿಂದ ಮೃತರಾದವರಿಗೆ ಪರಿಹಾರ ಒದಗಿಸಬೇಕು. ಸರಕಾರ ಬೆಲೆ ಏರಿಕೆ ಹೊರೆಯನ್ನು ನಿರುದ್ಯೋಗಿ ಬಡಜನರ ಮೇಲೆ ವಿಧಿಸುತ್ತಿರುವುದನ್ನು ನಿಲ್ಲಿಸಬೇಕು. ಲಾಕ್ ಡೌನ್ ಅವಧಿಯಲ್ಲಿ ರಜೆಗಳನ್ನು ಸಂಬಳ ಸಮೇತ ರಜೆ ಎಂದು ಘೋಷಿಸಬೇಕೆಂದು, ಅಗತ್ಯ ಔಷಧಿಗಳ ಕಾಳಸಂತೆಯನ್ನು ಕೂಡಲೇ ನಿಲ್ಲಿಸಬೇಕೆಂಬ ಕೂಗು ಕೇಳಿ ಬಂತು.

ಸಿಐಟಿಯು ತಾಲೂಕು ಸಂಚಾಲಕ ಎಚ್ ನರಸಿಂಹ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಮಹಾಬಲ ವಡೇರ ಹೋಬಳಿ, ಬಲ್ಕೀಸ್, ವಿ.ನರಸಿಂಹ ರಾಜುದೇವಾಡಿಗ ಮೊದಲಾವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
