ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೋವಿಡ್ ಸೋಂಕು ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತರನ್ನಾಗಿಸುತ್ತಿದೆ. ಕೊರೋನಾ ಸೋಂಕು ದೃಢಪಟ್ಟವರು ಖಿನ್ನತೆಗೊಳಪಡದಂತೆ ಅವರನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡುವವರು ಸದ್ಯದ ಪರಿಸ್ಥಿತಿಯಲ್ಲಿ ಅವಶ್ಯವಾಗಿ ಬೇಕು. ಅಂತಹುದರಲ್ಲಿ ಇಲ್ಲೊಂದು ವೈದ್ಯರ ಯುವ ತಂಡ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ವೈದ್ಯರ ಕೊರತೆ ಕಂಡಾಗ ಸರ್ಕಾರ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸಲು ಅರ್ಹ ವೈದ್ಯಕೀಯ ಪದವೀಧಾರರಿಂದ ಅರ್ಜಿ ಅಹ್ವಾನಿಸಿತ್ತು. ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಬೇಕಲ್ಲಾ ಎನ್ನುವ ಕಾರಣಕ್ಕಾಗಿ ಅರ್ಜಿ ಸಲ್ಲಿಸಲು ದೊಡ್ಡ ಮಟ್ಟದ ಉತ್ಸಾಹಗಳಿರಲಿಲ್ಲ. ಈ ಸಂದರ್ಭದಲ್ಲಿಯೇ ನಾವು ಸಿದ್ಧ ಎಂದು ಸೇವೆಗೆ ಟೊಂಕ ಕಟ್ಟಿ ನಿಂತವರು, ಡಾ.ಆಶಿತ್, ಡಾ. ರಜತ, ಡಾ. ರಚನಾ ಹಾಗೂ ಡಾ. ನಿವೇದಿತಾ ಎನ್ನುವ ನಾಲ್ವರು ಯುವ ವೈದ್ಯರುಗಳು.

ಧೈರ್ಯ- ಭರವಸೆ ತುಂಬುತ್ತೆ ಈ ತಂಡ
ಕೊರೊನಾ ಪಾಸಿಟೀವ್ ಆಗಿ ಸಾವು-ಬದುಕಿನ ಯೋಚನೆಗಳ ಚಿಂತೆಯಲ್ಲಿ ಮುಳುಗಿರುವವರಿಗೆ ಆಸರೆಯಾಗಿ, ಉತ್ಸಾಹವನ್ನೆರೆಯುತ್ತಾ, ಧನಾತ್ಮಕ ಚಿಂತನೆಗಳನ್ನು ತುಂಬುತ್ತಾರೆ ಈ ನಾಲ್ವರು.
ಸುರಕ್ಷಾ ಕಿಟ್ ಗಳನ್ನು ಧರಿಸಿ ಮುಖಕ್ಕೆ ಮಾಸ್ಕ್ ಧರಿಸಿ, ಕೊರಳಿಗೂಂದು ಸ್ಟೆಥಾಸ್ಕೋಪ್ ಹಾಕಿಕೊಂಡು ಅಂಜಿಕೆ ಇಲ್ಲದೆ ಕೋವಿಡ್ ವಾರ್ಡ್ ಪ್ರವೇಶಿಸುವ ಈ ವೈದ್ಯರು, ಪ್ರತಿಯೊಬ್ಬ ರೋಗಿಗಳ ಬಳಿಗೆ ಹೋಗಿ ಅವರ ಕುಶಲೋಪರಿ ವಿಚಾರಿಸುವ ಪರಿಯನ್ನು ಯಾರಾದರೂ ಮೆಚ್ಚಲೆ ಬೇಕು. ಕುಂದಾಪುರದ ಅಚ್ಚ ಕನ್ನಡದ ಕುಂದಾಪ್ರ ಭಾಷೆಯಲ್ಲೇ ಸೋಂಕಿತರೊಂದಿಗೆ ಸಂವಹನ ನಡೆಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿಸುತ್ತಿದ್ದಾರೆ.


ನಿಸ್ವಾರ್ಥ ಸೇವೆ
ವೈದ್ಯಕೀಯ ಪದವಿ ಪೂರೈಸಿದ ಇವರಿಗೆ ಉದ್ಯೋಗಕ್ಕೆ ಹೋಗಲೇ ಬೇಕು ಎನ್ನುವ ಅನಿವಾರ್ಯತೆ ಇರಲಿಲ್ಲ. ಸಹೋದರರಾದ ಆಶಿತ್ ಹಾಗೂ ರಜತ್ ಅವರ ತಂದೆ ಬಡಾಬೈಲ್ ರತ್ನಾಕರ ಶೆಟ್ಟಿಯವರು ಮುಂಬೈಯ ದೊಡ್ಡ ಉದ್ಯಮಿ. ಕೆಲ ತಿಂಗಳ ಹಿಂದಷ್ಟೇ ನಿಧನರಾಗಿದ್ದ ರಚನಾ ಅವರ ತಂದೆ ಮರಾಠ ಸುರೇಶ್ ಶೆಟ್ಟಿಯವರ ತಂದೆಯೂ ಮುಂಬೈಯಲ್ಲಿ ಪ್ರಸಿದ್ಧ ಹೋಟೆಲ್ ಉದ್ಯಮಿಯಾಗಿದ್ದವರು. ನಿವೇದಿತಾ ಅವರು ಕುಂದಾಪುರದ ಪ್ರಸಿದ್ಧ ಹವಲ್ದಾರ್ ಕುಟುಂಬದವರು. ಡಾ. ರಚನಾ ಅವರನ್ನು ಹೊರತು ಪಡಿಸಿ ಉಳಿದ ಮೂವರು ಈ ಮೊದಲೇ ಕೊರೊನಾ ಸೋಂಕಿತರಿಗಾಗಿ ಸೇವೆ ಆರಂಭಿಸಿದ್ದರು. Áಕ್ ಡೌನ್ ಕಾರಣಕ್ಕಾಗಿ ಮುಂಬೈನಿಂದ ಊರಿಗೆ ಬಂದಿದ್ದ ಈಕೆ ಮನೆಯಲ್ಲಿ ಕುಟುಂಬಿಕರೊಂದಿಗೆ ದಿನ ಕಳೆಯಬಹುದಿತ್ತು. ಆದರೆ ಆಕೆಯ ಆಯ್ಕೆ ಅದಾಗಿರಲಿಲ್ಲ. ಆಶಿತ್ ಹಾಗೂ ರಜತ ಅವರ ಸೇವಾ ಕಾರ್ಯ ಆಕೆಯನ್ನ ಕುಂದಾಪುರದ ಕೋವಿಡ್ ಆಸ್ಪತ್ರೆಗೆ ಕರೆತಂದಿದೆ.
ಕೊರೊನಾ ಸೋಂಕಿತರ ನೆರಳು ಬೇಡ ಎನ್ನುವ ಪ್ರಸ್ತುತ ಕಾಲಘಟ್ಟದಲ್ಲಿ ಸಹೋದರರಾದ ಡಾ. ಆಶಿತ್, ಡಾ. ರಜತ್, ಡಾ. ರಚನಾ ಹಾಗೂ ಡಾ. ನಿವೇದಿತಾ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಹಗಲೂ ರಾತ್ರಿ ಎನ್ನದೆ ರೋಗಿಗಳ ಜೀವ ರಕ್ಷಕರಾಗಿ ವಿಶ್ರಮಿಸದೆ ಶ್ರಮಿಸುತ್ತಿದ್ದಾರೆ. ಹಿರಿಯ ವೈದ್ಯರಾದ ಡಾ. ನಾಗೇಶ್ ಹಾಗೂ ಡಾ. ವಿಜಯಶಂಕರ್ ಅವರುಗಳು ಇವರಿಗೆ ವೈದ್ಯಕೀಯ ಮಾರ್ಗದರ್ಶನ ನೀಡುತ್ತಿದ್ದಾರೆ.

