ಮಂಗಳೂರು : ಪನಾಮ ಕಾರ್ಪೋರೇಷನ್ ಲಿಮಿಟೆಡ್ ಮತ್ತು
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ವತಿಯಿಂದ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಪುಣ್ಯ ತಿಥಿಯ ಅಂಗವಾಗಿ ಇಂದು 1000 ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

ಮಂಗಳೂರಿನ 4 ವಿವಿಧ ಸ್ಥಳಗಳಲ್ಲಿ ಕಿಟ್ ವಿತರಣೆಯು ನಡೆಯಿತು. ಮೊದಲಿಗೆ ಬೆಳಗ್ಗೆ 11 ಗಂಟೆಗೆ ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಆದ ಕುಮಾರಿ ಅಪ್ಪಿಯವರ ಉಸ್ತುವಾರಿಯಲ್ಲಿ ನಡೆಯಿತು. ಮಧ್ಯಾಹ್ನ 12 ಗಂಟೆಗೆ ನಾಗುರಿ ಜಂಕ್ಷನ್ ನಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿಯಾದ ಆಶಿತ್ ಜಿ.ಪಿರೇರಾರವರ ಉಸ್ತುವಾರಿಯಲ್ಲಿ ನಡೆಯಿತು. ಸಂಜೆ 4 ಗಂಟೆಗೆ ಅಶೋಕ ನಗರ ಶಾಲೆಯ ಬಳಿ ಕಸ ವಿಲೇವಾರಿ ಮಾಡುವವರಿಗೆ ಕಿಟ್ ವಿತರಣೆಯು ಮಹೇಶ್ ಕೋಡಿಕ್ಕಲ್ ರವರ ಉಸ್ತುವಾರಿಯಲ್ಲಿ ನಡೆಯಿತು. ಸಂಜೆ 4:30 ಕ್ಕೆ ಕೊಟ್ಟಾರ ಚೌಕಿ ಓವರ್ ಬ್ರಿಡ್ಜ್ ಬಳಿ ಟೆಂಪೋ ಚಾಲಕರಿಗೆ ಕಿಟ್ ವಿತರಣೆಯು ಆಲಿಸ್ಟನ್ ಡಿಕುನ್ಹಾ ಮತ್ತು ಅನಿಲ್ ಡಿ’ಸೋಜಾರವರ ಉಸ್ತುವಾರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ಸಂಚಾಲಕರಾದ ಐವನ್ ಡಿ’ಸೋಜಾರವರು ಮಾತನಾಡಿ ” ಈ ಕೊರೋನದ ಸಂಕಷ್ಟದ ಸಮಯದಲ್ಲಿ, ಮಾನವೀಯತೆಯ ದೃಷ್ಟಯಿಂದ ಒಬ್ಬರಿಗೊಬ್ಬರು ಸಹಾಯ ಮಾಡಿ ಒಟ್ಟಾಗಿ ನಿಲ್ಲುವುದು ನಮ್ಮ ಕರ್ತವ್ಯ. ಹೆಚ್ಚು ತೊಂದರೆಯಲ್ಲಿರುವ ಜನರಿಗೆ ನಾವು ಮುಂದೆ ಹೆಜ್ಜೆ ಇಟ್ಟು ನಮ್ಮ ಸಹಾಯ ಹಸ್ತ ಚಾಚಬೇಕು ಎಂಬುವುದು ನಮ್ಮ ಉದ್ದೇಶ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಮ್ಮ ಈ ಸಹಾಯ ಮಾಡುವ ಉದ್ದೇಶವನ್ನು ಇನ್ನೂ ವಿಸ್ತರಿಸಲು ಸಾಧ್ಯವಾಗುವಂತೆ ಮಾಡಿದೆ ಎಂದು ನಾವು ಭಾವಿಸಿದ್ದೇವೆ. ನಾವು ರಾಜೀವ್ ಗಾಂಧಿಯವರ ಸಿದ್ಧಾಂತವನ್ನು ಬಲವಾಗಿ ನಂಬಿದ್ದೇವೆ ಮತ್ತು ಅದನ್ನು ಪಾಲಿಸುತ್ತಾ ಬಂದಿದ್ದೇವೆ ” ಎಂದರು.
ಪನಾಮ ಕಾರ್ಪೋರೇಷನ್ ಲಿಮಿಟೆಡ್ ನ ಚೇರ್ಮನ್ ಮತ್ತು ಸಿ.ಇ.ಒ ವಿವೇಕ್ ರಾಜ್ ಪೂಜಾರಿ ಮಾತನಾಡಿ, ” ನಾವು ಕಳೆದ ವರ್ಷವೂ ಕೊರೋನದ ಸಂಕಷ್ಟದ ಸಮಯದಲ್ಲಿ ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವ ಈ ಮಹಾತ್ಕಾರ್ಯವನ್ನು ಪ್ರಾರಂಭಿಸಿದ್ದೆವು. ಅಂದು 1000 ವಲಸೆ ಕಾರ್ಮಿಕರ ಬೆನ್ನೆಲುಬಾಗಿ ನಿಂತು, ಅವರಿಗೆ ಅಗತ್ಯವಿರುವ ಎಲ್ಲ ಸಾಮಾಗ್ರಿಗಳನ್ನು ಒದಗಿಸಿದೆವು. ನಂತರ ನಾವು ಬೀದಿ ಬದಿ ವ್ಯಾಪಾರಿಗಳತ್ತ ಗಮನಹರಿಸಿ, ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಛತ್ರಿಗಳನ್ನು ಒದಗಿಸಿದ್ದೇವೆ. ಇದರಿಂದಾಗಿ ಅವರಿಗೆ ಕೆಲಸ ಮಾಡಲು ಹೆಚ್ಚು ಆರಾಮದಾಯಕ ವಾತಾವರಣವನ್ನು ನೀಡುತ್ತದೆ. ಸಂಕಷ್ಟದ ಸಮಯದಲ್ಲಿ ತಮ್ಮ ವ್ಯವಹಾರಗಳನ್ನು ಉಳಿಸಿಕೊಳ್ಳಲು ಸಹಾಯಾರ್ಥವಾಗಿ ನಾವು 10 ಪುಶ್ ಬಂಡಿಗಳನ್ನು ಸಹ ಒದಗಿಸಿದೆವು. ಮುಂಬರುವ ದಿನಗಳಲ್ಲಿ ಇನ್ನೂ 30 ಪುಶ್ ಬಂಡಿಗಳನ್ನು ವಿತರಿಸಲಾಗುವುದು ಮತ್ತು ಈ ಮಾರಾಟಗಾರರಿಗೆ ನೈರ್ಮಲ್ಯ ಮತ್ತು ಸುರಕ್ಷಿತೆಯ ಬಗ್ಗೆ ತಿಳುವಳಿಕೆ ನೀಡುವುದರ ಜೊತೆಗೆ ತಮ್ಮ ಬಂಡಿಗಳನ್ನು ಆಯಕಟ್ಟಿನ ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಅಥವಾ ಸಾರ್ವಜನಿಕರಿಗೆ ಅನಾನುಕೂಲವಾಗದ ರೀತಿಯಲ್ಲಿ ಇರಿಸುವ ಬಗ್ಗೆ ಅರಿವು ಮೂಡಿಸುವಂತಹ ಉದ್ದೇಶ ಕೂಡ ಇದೆ. ಕಳೆದ ಲಾಕ್ಡೌನ್ ಸಮಯದಲ್ಲಿ 10,000 ಕ್ಕೂ ಹೆಚ್ಚು ಜನರಿಗೆ ನಮ್ಮ ತಂಡ ಮತ್ತು ನಾನು ಸಹಾಯ ಮಾಡಿದ್ದರೂ, ಒಂದು ಕಾಲದಲ್ಲಿ ಸ್ಥಿರವಾದ ಆದಾಯವನ್ನು ಹೊಂದಿದ್ದ ಅನೇಕ ವ್ಯಕ್ತಿಗಳು ಈಗ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ ಮತ್ತು ಸಮಾಜದಲ್ಲಿ ಸಂಕೋಚದ ಕಾರಣದಿಂದ ಮುಂದೆ ಬಂದು ಸಹಾಯ ಪಡೆಯಲು ಹಿಂಜರಿಯುತ್ತಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಈ ಸಮಯದಲ್ಲಿ ನಾವು ಅವರ ಮನೆಗೆ ತಲುಪಿ ಸಹಾಯವನ್ನು ಮಾಡುತ್ತಿದ್ದೇವೆ. ಅಗತ್ಯವಿರುವ ಪ್ರತಿಯೊಬ್ಬರೂ ಮುಕ್ತ ಮನಸ್ಸಿನಿಂದ ನಮ್ಮನ್ನು ಸಂಪರ್ಕಿಸಬಹುದು ಎಂದು ನಾವು ವಿನಂತಿಸಿಕೊಳ್ಳುತ್ತಿದ್ದೇವೆ” ಎಂದರು.

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರುಗಳು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್-19 ಹೆಲ್ಪ್ ಲೈನ್ ನ ಸದಸ್ಯರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
