ನವದೆಹಲಿ : ಒಲಂಪಿಕ್ಸ್ ಪದಕ ವಿಜೇತ ರಸ್ಲರ್ ಸುಶೀಲ್ ಕುಮಾರ್ ರನ್ನು ಪಂಜಾಬ್ ನ ಭಟಿಂಡಾದಲ್ಲಿ ಬಂಧಿಸಲಾಗಿದೆ. ಕೊಲೆ ಪ್ರಕರಣದ ಆರೋಪಿಯಾಗಿದ್ದ ಸುಶೀಲ್ ತಲೆಮರೆಸಿಕೊಂಡಿದ್ದರು. ಶನಿವಾರ ಅವರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನವದೆಹಲಿಯ ಛತ್ರಸಾಲ ಮೈದಾನದಲ್ಲಿ ಮೇ 4 ರ ರಾತ್ರಿ 23 ರ ಹರೆಯದ ಕುಸ್ತಿಪಟು ಸಾಗರ್ ರಾಣಾ ಕೊಲೆ ನಡೆದಿತ್ತು. ಬೇರೆ ರೆಸ್ಲರ್ ಗಳ ಜೊತೆ ಸೇರಿ ಹತ್ಯೆ ಮಾಡಿದ್ದಾರೆಂಬಬ ಆರೋಪ ಸುಶೀಲ್ ಮೇಲಿದ್ದು, ಕೃತ್ಯದ ಬಳಿಕ ಅವರು ತಲೆ ಮರೆಸಿಕೊಂಡಿದ್ದರು. ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರೂ ದಿಲ್ಲಿ ಸ್ಥಳೀಯ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ತಲೆಮರೆಸಿಕೊಂಡಿದ್ದ ಸುಶೀಲ್ ಸುಳಿವು ಕೊಟ್ಟಲ್ಲಿ 1 ಲಕ್ಷ ರೂ. ನಗದು ಪುರಸ್ಕಾರ ನೀಡಲಾಗುವುದೆಂದು ದೆಹಲಿ ಪೊಲೀಸರು ಘೋಷಿಸಿದ್ದರು.

ಸುಶೀಲ್ ಕುಮಾರ್ ಎರಡು ಬಾರಿ ಒಲಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದಾರೆ. ಬೀಜಿಂಗ್ ಒಲಂಪಿಕ್ಸ್ ನಲ್ಲಿ ಕಂಚು, ಲಂಡನ್ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಲಕ್ಷಾಂತರ ಅಭಿಮಾನಿಗಳನ್ನೂ ಅವರು ಹೊಂದಿದ್ದಾರೆ.

